ಭೋವಿ ಸಮಾಜವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸ್ವಾಮೀಜಿಗಳ ಪರಿಶ್ರಮ ಅಪಾರ

ರಾಜ್ಯ

ಚಿತ್ರದುರ್ಗ : ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹವೆಂಬುದು ಪ್ರಮುಖ ಘಟ್ಟ. ನಗರೀಕೃತ ಜೀವನದಲ್ಲಿ ವಿವಾಹ ಸಂಬಂಧಗಳು ಬಿರುಕು ಬಿಟ್ಟುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಸ್ವಾಮಿ ವಿಷಾಧಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ದೀಕ್ಷಾ ರಜತ ಮಹೋತ್ಸವದ ಅಂಗವಾಗಿ ಭೋವಿ ಗುರುಪೀಠದಲ್ಲಿ ಶುಕ್ರವಾರ ನಡೆದ ವಧುವರರ ಅನ್ವೇಷಣಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ವಿಚ್ಚೇದನದಂತ ಸುದ್ದಿಗಳನ್ನು ಮಾಧ್ಯಮಗಳು ವೈಭವೀಕರಿಸುತ್ತಿರುವುದು ಕೌಟುಂಬಿಕ ಬುನಾದಿಗಳನ್ನು ಅಲುಗಾಡಿಸಿದಂತಿದೆ. ಸಾವಿರಾರು ಸುಳ್ಳೇಳಿ ಒಂದು ಮದುವೆ ಮಾಡಿ ಎಂಬ ಗಾಧೆ ಮಾತಿಗೆ ವ್ಯತಿರಿಕ್ತವಾಗಿ ಸುಳ್ಳು, ಮೋಜಿಗೆ ಒಳಗಾಗಿ ಅನೇಕರು ಬದುಕು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಇಂದಿನ ಸಮುದಾಯದ ಮಠಗಳು ಧಾರ್ಮಿಕ ಕೇಂದ್ರಗಳಾಗಿ ಧರ್ಮ, ಸಂಸ್ಕಾರ, ಸಂಸ್ಕøತಿ ನೀಡಿ ಕುಟುಂಬಗಳನ್ನು ಕೂಡಿಸಲು ವಧುವರರ ಸಮಾವೇಶ ಸಹಕಾರಿಯಾಗಲಿದೆ ಎಂದರು.

ಕೌಟುಂಬಿಕ ಕಲಹಗಳಿಗೆ ಮಠಗಳು ಧಾರ್ಮಿಕ ನ್ಯಾಯಾಲಯಗಳಾಗಿ, ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳಾಗಿ, ನಿರ್ಗತಿಕರಿಗೆ ವೃದ್ದಾಶ್ರಮಗಳಾಗಿ, ಅಬಲರಿಗೆ ಸಾಂತ್ವಾನ ಕೇಂದ್ರಗಳಾಗಿ ಕೆಲಸ ಮಾಡುತ್ತಿರುವುದಕ್ಕೆ ಸಮಾಜ ಮತ್ತು ಸಮುದಾಯ ಸಂತೋಷ ಪಡಬೇಕು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪರಿಶಿಷ್ಠ ಜಾತಿ ಭೋವಿ ಸಮಾಜದ ಗುರುಗಳಾಗಿ ಪಟ್ಟಕ್ಕೇರಿ 25 ವರ್ಷಗಳಾಗಿದೆ. ಸರ್ವ ಸಮಾಜಕ್ಕೂ ಬೆಳಕು, ಭರವಸೆ ನೀಡುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

 

ರಾಜ್ಯಾದ್ಯಂತ ಹದಿನೈದು ಲಕ್ಷಕ್ಕೂ ಹೆಚ್ಚು ಕಿ.ಮೀ.ಗಳನ್ನು ಸುತ್ತಾಡಿ ಭೋವಿ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿರುವ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಮರ್ಪಣಾ ಭಾವದಿಂದ ರಾಷ್ಟ್ರದ ಗಮನ ಸೆಳೆಯುವ ಗಟ್ಟಿ ವ್ಯಕ್ತಿತ್ವ ಹೊಂದಿ ಜನಮನ್ನಣೆ ಗಳಿಸುತ್ತಿದ್ದಾರೆ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಜೊತೆಗೆ ವಧುವರರ ಮುಖಾಮುಖಿ ಮಾಡಿಸುವ ಮೂಲಕ ಕೌಟುಂಬಿಕ ವ್ಯವಸ್ಥೆ ಗಟ್ಟಿಗೊಳಿಸುವ ಕಾಯಕ ನಿರಂತರವಾಗಿ ಸಾಗಿದೆ ಎಂದು ಹೇಳಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಪಟ್ಟಕ್ಕೇರಿ 25 ವರ್ಷಗಳಾಗಿದೆ. ಅಂದಿನಿಂದ ಇಲ್ಲಿಯತನಕ ಚದುರಿ ಹೋಗಿರುವ ನಮ್ಮ ಸಮಾಜವನ್ನು ಸಂಘಟಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಎಲ್ಲರಿಗೂ ಗೌರವ ತರುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ದೀಕ್ಷಾ ರಜತ ಮಹೋತ್ಸವದ ಸಂದರ್ಭದಲ್ಲಿ ವಧುವರರ ಅನ್ವೇಷಣೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಬೇಡಿಕೆ ಹೆಚ್ಚಾಗಿ 200 ಕ್ಕೂ ಅಧಿಕ ಅನ್ವೇಷಣೆಗಳು ನಡೆಯುತ್ತಿದೆ. ಭೋವಿ ಸಮಾಜವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸ್ವಾಮೀಜಿಗಳ ಪರಿಶ್ರಮ ಅಪಾರ ಎಂದು ಗುಣಗಾನ ಮಾಡಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಹ್ಲಾದ್ಜೋಶಿ, ಸೋಮಣ್ಣ ಸೇರಿದಂತೆ ಅನೇಕ ಮಂತ್ರಿಗಳು, ಶಾಸಕರು ದೀಕ್ಷಾ ರಜತ ಮಹೋತ್ಸವಕ್ಕೆ ಶನಿವಾರ ಆಗಮಿಸುತ್ತಿದ್ದಾರೆ. ರಾಜ್ಯಾದ್ಯಂತ ಭೋವಿ ಸಮಾಜ ಒಗ್ಗಟ್ಟಾಬೇಕೆಂದು ಕರೆ ನೀಡಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವಲಿಂಗಮೂರ್ತಿ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುಂಡಯ್ಯ ಮಹಾಸ್ವಾಮೀಜಿ, ವೇಮನಾನಂದ ಸ್ವಾಮೀಜಿ, ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಗವಿ ಸಿದ್ದೇಶ್ವರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪ್ರಸನ್ನಾನಂದ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ 

ಶಿವಬಸವ ಸ್ವಾಮೀಜಿ, ಬಸವ ಪ್ರಸಾದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಸಂದರ್ಭದಲ್ಲಿದ್ದರು.

Leave a Reply

Your email address will not be published. Required fields are marked *