ಹೊಸದುರ್ಗದ ಮೆಣಸಿನೋಡು ಗ್ರಾಮದಲ್ಲಿ ಕಾರೇಹಳ್ಳಿ ಗ್ರಾಮದ ಶಿವಣ್ಣ ಎಂಬ ವ್ಯಕ್ತಿಯು ಅಕ್ರಮವಾಗಿ ಬೈಕ್ ಮೇಲೆ ಬಂದು ಮದ್ಯ ಮಾರಾಟ ಮಾಡುತ್ತಿದ್ದು, ಇವನನ್ನು ಗ್ರಾಮಸ್ಥರು ಮಹಿಳೆ ನೇತೃತ್ವದಲ್ಲಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.
ಪ್ರತೀ ದಿನ ಮೆಣಸಿನೋಡು ಗ್ರಾಮಕ್ಕೆ ಬೈಕಿನಲ್ಲಿ ಬಂದು ಮದ್ಯ ಮಾರಾಟ ಮಾಡುತ್ತಿದ್ದ ಶಿವಣ್ಣನ ಜೊತೆಗೆ ಗಲಾಟೆಗೆ ಇಳಿದ ಮಹಿಳೆ ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದಾಳೆ.ಇದರಿಂದ ಶಿವಣ್ಣ ಮತ್ತು ಮಹಿಳೆ ಮದ್ಯೆ ಮಾತಿನ ಚಕಮಕಿ ನಡೆದಿದೆ. ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ, ಇಲಾಖೆಯಾಗಲಿ, ತಾಲೂಕು ಆಡಳಿವಾಗಲಿ ಯಾವುದೇ ಕ್ರಮ ಜರುಗಿಸಿರಲಿಲ್ಲ. ಆದ್ಧರಿಂದ ರೊಚ್ಚಿಗೆದ್ದ ಮಹಿಳೆಯು ಶಿವಣ್ಣ ಎಂಬ ವ್ಯಕ್ತಿಯನ್ನು ತಡೆದು, ಬೈಕಿನ ಬ್ಯಾಗಿನೊಳಗೆ ಚಕ್ ಮಾಡಿದ್ದು, ಅದರಲ್ಲಿ ಮದ್ಯದ ಪಾಕೇಟ್ ಗಳಿರುವುದು ಕಂಡು ಬಂದಿದೆ. ಕೂಡಲೇ ಶ್ರೀರಾಂಪುರ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮದ್ಯ ಮಾರಾಟ ಮಾಡಲು ಬಂದಿದ್ದ ಶಿವಣ್ಣನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.