ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಅಕ್ರಮ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಇದು ಬಿಜೆಪಿಯವರ ಕುತಂತ್ರ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಹೆಚ್.ಅಂಜನೇಯ ದೂರಿದ್ದಾರೆ.
ಚಿತ್ರದುರ್ಗ ನಗರದ ಡಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ತುಳಿಯಲು ಕೇಂದ್ರದ ಎನ್ಡಿಎ ಸರ್ಕಾರ ಯತ್ನಿಸುತ್ತಿದೆ. ರಾಜ್ಯದಲ್ಲಿ ರಾಜ ಭವನವನ್ನು ರಾಜ್ಯಪಾಲರು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಗವರ್ನರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಆಗಿರುವುದು ಸಂವಿಧಾನದ ಕಗ್ಗೊಲೆ. ಒಬ್ಬ ಹಿಂದುಳಿದ ವರ್ಗದ ನಾಯಕ ಜನಪರ ಆಡಳಿತ ನಡೆಸುತ್ತಿ ರುವುದನ್ನು ಅರಗಿಸಿಕೊಳ್ಳಲಾಗದೆ ಕೇಂದ್ರ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಭವನವನ್ನು ಉಪಯೋಗಿಸಿಕೊಂಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
ಕೇಂದ್ರ ಸರ್ಕಾರವು ಸಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮತ್ತು ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸಂವಿಧಾನ ಬಾಹಿರ ಕೃತ್ಯದಲ್ಲಿ ತೊಡಗಿರುತ್ತದೆ. ರಾಜ್ಯಪಾಲರ ಮುಂದೆ ಪ್ರಾಸುಕ್ಯೂಷನ್ಗಾಗಿ ನೂರಾರು ದೂರುಗಳು ಬಾಕಿ ಇದ್ದರು, ಮುಖ್ಯಮಂತ್ರಿಗಳ ವಿರುದ್ಧ ತರಾತುರಿಯಲ್ಲಿ ಅನುಮತಿ ನೀಡಿರುವುದು ಸಂವಿಧಾನ ಬಾಹಿರ ಎಂದು ದೂರಿದ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಅಂಶವು ಮೇಲ್ನೋಟಕ್ಕೆ ಕಾಣುತ್ತಿರುವುದರಿಂದ ಈ ಹಿಂದೆಯು ಸಹ ಕೇಂದ್ರ ಸರ್ಕಾರವು ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕೆಲ ಸರ್ಕಾರಗಳನ್ನು ಅಸ್ಥಿರಗೊಳಿಸಿರುವುದು ಇತಿಹಾಸದ ಪುಟಗಳಿಂದ ತಿಳಿಯಬಹುದು ಎಂದರು.
ರಾಜ್ಯಪಾಲರು ತಮ್ಮ ಕರ್ತವ್ಯದಲ್ಲಿ ಯಾರದೂ ಕೈಗೊಂಬೆಯಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಇದರ ವಿರುದ್ದ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ, ಜನತೆಯೂ ಸಹಾ ಸಹಕಾರ ನೀಡಿದ್ದಾರೆ, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ವಾಪಸ್ಸ್ ಕರೆಯಿಸಿಕೊಳ್ಳಬೇಕು ರಾಜ್ಯಪಾಲರು ಸಿ.ಎಂ.ಗೆ ನೀಡಿರುವ ಅನುಮತಿಯನ್ನು ವಾಪಸ್ಸ್ ಪಡೆಯಬೇಕೆಂದು ಅಂಜನೇಯ ಆಗ್ರಹಿಸಿದರು.
ಡಿಸಿಸಿ ಜಿಲ್ಲಾಧ್ಯಕ್ಷರಾಧ ತಾಜ್ ಪೀರ್ ಮಾತನಾಡಿ, ಸಿದ್ದರಾಮಯ್ಯ ರವರ ಮೇಲೆ ಬಂದಿರುವ ಆರೋಪದ ವಿರುದ್ದ ಆ. 19ರ ನಾಳೆ ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು, ಅಂದು ಬೆಳಿಗ್ಗೆ 11 ಗಂಟಟೆಯಿಂದ ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ತದ ನಂತರ ರಾಜ್ಯಪಾಲರನ್ನು ವಜಾ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದೆಂದರು.
ಗೋಷ್ಟಿಯಲ್ಲಿ ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಪಂಚ ಗ್ಯಾರೆಂಟಿಗಳ ಪ್ರಾಧಿಕಾರ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಜಿ.ಪಂ. ಮಾಜಿ ಸದಸ್ಯರಾದ ನರಸಿಂಹರಾಜು, ಪ್ರಕಾಶ್ ಮೂರ್ತಿ, ಗಂಗಾಧರ್, ಮಹಡಿ ಶಿವಮೂರ್ತಿ ಶ್ರೀಮತಿ ಆರತಿ ಸೇರಿದಂತೆ ಇತರರೂ ಭಾಗವಹಿಸಿದ್ದರು.