ಚಿತ್ರದುರ್ಗದ ಮಾಜಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಅವರಿಗೆ ಅನಾಮಧೇಯನೊಬ್ಬ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಕರೆ ಮಾಡಿದ್ದ ವ್ಯಕ್ತಿಯು ತಿಪ್ಪಾರೆಡ್ಡಿ ಅವರಿಗೆ ಕರೆ ಮಾಡಿ ನೀವು ಯಾಕೆ ದರ್ಶನ್ ವಿರುದ್ದ ಪ್ರತಿಭಟನೆ ಮಾಡುತ್ತೀರಾ ಎಂದು ಕೇಳಿದ್ದು, ಅದಕ್ಕೆ ರೇಣುಕಾಸ್ವಾಮಿ ಕೊಲೆಯಾಗಿರುವ ವಿಚಾರವನ್ನು ಹೇಳಿದಾಗ, ಅವನು ಪ್ರತಿಭಟನೆ ಮಾಡಬೇಡಿ ಎಂದು ಬೆದರಿಕೆ ಹಾಕಿದ್ದಾನೆ. ನಾನು ಅವನ ಬಗ್ಗೆ ವಿಚಾರಿಸುವಷ್ಟರಲ್ಲಿ ಫೋನ್ ಕಟ್ ಮಾಡಿದ್ದಾನೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಶಾಸಕರು ಭಾಗವಹಿಸಿದ್ದರು. ಬೆದರಿಕೆ ಕರೆ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಆದರೆ ಆ ವ್ಯಕ್ತಿ ಬಗ್ಗೆ ಯಾವುದೇ ದೂರನ್ನು ನೀಡಿಲ್ಲ ಎಂದರು.