ಬೆಂಗಳೂರು: ಕರೊನಾ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ 250 ಕೋಟಿ ರೂ. ಅಕ್ರಮ ನಡೆದಿದೆ ಎಂದು ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.ಲೋಕಸಭಾ ಕ್ಷೇತ್ರದ ವ್ತಾಪ್ತಿಯಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ವಿವಿಧ ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ಅವ್ಯವಹಾರವಾಗಿದ್ದು, ತನಿಖೆ ನಡೆಸಿ ಎಂದು ಸುರೇಶ್ ಬುಧವಾರ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೋರಿ ಕ್ಲೀನ್ ಮಾಡಿದೆ, ರಸ್ತೆ ಕ್ಲೀನ್ ಮಾಡಿದೆ ಅಂತ ನಕಲಿ ಬಿಲ್ ಆಗಿದೆ. ಮುನಿರತ್ನ ಆ ಕ್ಷೇತ್ರದ ಮಾಜಿ ಶಾಸಕರು. ಅವರು ಭಾಗಿಯಾಗಿದ್ದಾರೆ ಎಂದು ನಾನು ಹೇಳಲ್ಲ. ನಾನು ಯಾವುದೇ ಆರೋಪ ಮಾಡಲು ಹೋಗಲ್ಲ. ಈ ಹಗರಣಕ್ಕೆ ಬಿಬಿಎಂಪಿಯ ಎಂಜಿನಿಯರ್ಗಳು, ಅಧಿಕಾರಿಗಳೇ ನೇರ ಕಾರಣ. ನಕಲಿ ಬಿಲ್ ಬಗ್ಗೆ ಎಲ್ಲ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ ದೂರು ದಾಖಲಿಸಿದ್ದೇನೆ ಎಂದರು.
ಜನವರಿಯಲ್ಲಿ ನಕಲಿ ಬಿಲ್ ಆಗಿದೆ. ಒಟ್ಟು 130 ಕಾಮಗಾರಿಗಳು ನಕಲಿ ಬಿಲ್ ಆಗಿದೆ. ಕ್ಷೇತ್ರದ ಎಲ್ಲ ಬಿಬಿಎಂಪಿ ಅಧಿಕಾರಿಗಳೇ ಇದಕ್ಕೆ ನೇರ ಕಾರಣ. ಅಧಿಕಾರಿಗಳೇ ಟೆಂಡರ್ ತೆಗೆದುಕೊಳ್ಳುವುದು, ಕೆಲಸ ಮಾಡೋದು ಅವರೇ, ಹಣ ಪಡೆಯೋದು ಅವರೇ ಎಂದು ಡಿ.ಕೆ.ಸುರೇಶ್ ಆರೋಪಿಸಿದರು.ಕರೊನಾ ಸಂದರ್ಭದಲ್ಲಿ ಈ ರೀತಿ ಲೂಟಿ ಹೊಡೆದಿದ್ದಾರೆ. ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮುನಿರತ್ನ ರಾಜೀನಾಮೆ ಕೊಟ್ಟು ಒಂದೂಕಾಲು ವರ್ಷ ಆಗಿದೆ. ಇದರಲ್ಲಿ ಇಂಜಿನಿಯರ್ಗಳ ಪಾತ್ರ ಇದೆಯೇ ಹೊರತು ಬೇರೆ ಯಾರ ಪಾತ್ರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.