ವಯಸ್ಸಿಗನುಗುಣವಾಗಿ ವಯೋವೃದ್ಧರು ಹಲ್ಲುಗಳನ್ನು ಕಳೆದುಕೊಂಡು ಆಹಾರ ಅಗಿದು ಸೇವಿಸಲು ಅಸಮರ್ಥರಾಗುತ್ತಾರೆ. ಬಡತನ ರೇಖೆಗಿಂತ ಕೆಳಗಿರುವ 45 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ದಂತ ಪಂಕ್ತಿ ಅಳವಡಿಸಿಕೊಂಡು ಸಾಮಾನ್ಯರಂತೆ ಆಹಾರ ಸೇವನೆ ಮಾಡಿ ಉತ್ತಮ ಆರೋಗ್ಯ ಹೊಂದಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್ ಹೇಳಿದರು.
ನಗರದ ಬಿ.ಸಿ.ರಾಯ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ವತಿಯಿಂದ ಜಿಲ್ಲಾ ಆಸ್ಪತ್ರೆ ಆವರಣದ ಬಿ.ಸಿ.ರಾಯ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಯಿಯ ಆರೋಗ್ಯ ಮತ್ತು ದಂತ ಭಾಗ್ಯ ಯೋಜನೆ ಕಾರ್ಯಕ್ರಮದಡಿಯಲ್ಲಿ ಕೃತಕ ದಂತಪಂಕ್ತಿ ವಿತರಣೆ ಮಾಡಿ ಅವರು ಮಾತನಾಡಿದರು.ಜಿಲ್ಲಾ ಆಸ್ಪತ್ರೆಯ ದಂತ ವಿಭಾಗದಲ್ಲಿ ಪ್ರತಿದಿನ ದಂತ ಪರೀಕ್ಷೆ ಮಾಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಬಂದು ಪರೀಕ್ಷೆ ಮಾಡಿಸಿ ಸರ್ಕಾರ ಒದಗಿಸುವ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಹಾಗೂ ಇತರರಿಗೂ ಕೂಡ ಮಾಹಿತಿ ನೀಡಬೇಕು ಎಂದು ಉಚಿತ ದಂತ ಪಂಕ್ತಿ ಪಡೆಯಲು ಬಂದ ಫಲಾನುಭವಿಗಳಿಗೆ ತಿಳಿಸಿದರು