ರಾಜ್ಯ ಸುದ್ದಿ: ಡಿಸಿಎಂ ಪಟ್ಟದ ಆಸೆ ತೋರಿಸಿ ನಾಯಕ ಸಮೂದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಅಧಿಕಾರ ಹಿಡಿದಿರೋ ಬಿಜೆಪಿ ಶ್ರೀರಾಮುಲು ಅವರನ್ನು ಒಂದು ದಾಳವಾಗಿ ಬಳಸಿಕೊಂಡು ಬಿಸಾಡುವ ರೀತಿ ಮಾಡುತ್ತಿದ್ದು, ಇದರಿಂದ ಸಿಟ್ಟಿಗೆದ್ದಿರುವ ನಾಯಕ ಸಮೂದಾಯದ ಹಾಗೂ ಬಿಜೆಪಿಯ ಪ್ರಭಾವಿ ನಾಯಕ ಶ್ರೀರಾಮುಲು ಬಿಜೆಪಿ ವಿರುದ್ದ ಸಿಡಿದು ಕಾಂಗ್ರೆಸ್ ತೆಕ್ಕೆಗೆ ಬರುತ್ತಾರಾ? ಇಂತಹ ಕುತೂಹಲ ಪ್ರಶ್ನೆಗಳು ಎರಡು ಪಕ್ಷಗಳಲ್ಲಿ ಮೂಡಿವೆ.
ಇದೆಲ್ಲದಕ್ಕೂ ಕಾರಣ ಶ್ರೀರಾಮುಲು ಸದಾ ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಹೋದಲ್ಲಿ ಬಂದಲ್ಲಿ ಕೆಂಡಕಾರುತ್ತಲೆ ಬಂದಿದ್ದು, ಇದೀಗ ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನನಗೆ ಸಿದ್ದರಾಮಯ್ಯ ಅವರ ಬಗ್ಗೆ ಕೋಪವಿಲ್ಲ ಎಂದು ಹೇಳಿದ್ದಾರೆ.ಈ ಹೇಳಿಕೆಗಳು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಲು ಕಾರಣರಾಗಿವೆ. ನಾನು ಸಿದ್ದರಾಮಯ್ಯ ಇಬ್ಬರೂ ಕೂಡ ಹಿಂದುಳಿದ ನಾಯಕರು ಅವರು ಸಿಎಂ ಆಗಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಒಂದೇ ವೇದಿಕೆಯಲ್ಲಿ ನಿಂತು ಹಿಂದುಳಿದ ಸಮಾಜವನ್ನುಕಟ್ಟುವ ಹಾಗೂ ಕಾಪಾಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಸಿಡಿದು ರಾಮುಲು ಕೈ ಹಿಡಿಯುತ್ತಾರಾ? ಎಂಬ ಕೂತೂಹಲ ಮೂಡಿಸಿದ್ದು ಎಲ್ಲೆಡೆಯೂ ಇದರದ್ದೇ ಚರ್ಚೆ ಆಗುತ್ತಿದೆ. ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಯಾರೂ ಊಹಿಸಲು ಸಾಧ್ಯವಿಲ್ಲ ಕಾಲವೇ ಇದಕ್ಕೆ ಉತ್ತರ ನೀಡಬೇಕಷ್ಟೆ