ತೆಪ್ಪೋತ್ಸವ ನೋಡಲು ಹರಿದು ಬಂದಿತು ಲಕ್ಷಾಂತರ ಜನ

ರಾಜ್ಯ

ಭಕ್ತಿ ಭಾವದ ಪರವಶ ಕ್ಷಣಕ್ಕೆ ಸಾಕ್ಷಿಯಾದ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ : ಹರಿದು ಬಂದ ಜನಸಾಗರ 

ವರ್ಷದ ನಂತರ ಕೋಡಿ ಬಿದ್ದ ನಾಯಕನಹಟ್ಟಿಯ ಐತಿಹಾಸಿಕ ಹಿರೇಕೆರೆಯಲ್ಲಿ ಶ್ರೀ ಕ್ಷೇತ್ರದ ಅವಧೂತ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. ಭಕ್ತಿ ಭಾವದ ಪರವಶ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಈ ಹಿಂದೆ 2010 ರಲ್ಲಿ ಹಿರೆಕೆರೆ ತುಂಬಿ ಕೋಡಿ ಬಿದ್ದಿತ್ತು‌. ಆ ವರ್ಷದ ಡಿ.16 ರಂದು ತೆಪ್ಪೋತ್ಸವ ಜರುಗಿಸಲಾಗಿತ್ತು. ಈ ಬಾರಿ ಉತ್ತಮ ಮಳೆಯಿಂದ ಹಿರೇಕೆರೆ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು, ದೈವಸ್ಥರು, ಗುರುತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

*ಸಾಂಪ್ರದಾಯಿಕ ಜನಪದರ ಹಬ್ಬ*

ಎತ್ತಿನ ಬಂಡಿ, ಟ್ಯಾಕ್ಟರ್, ಟೆಂಪೋ, ಕಾರು, ಬೈಕ್‌ಗಳಲ್ಲಿ ಚಿತ್ರದುರ್ಗ, ಬಳ್ಳಾರಿ,ದಾವಣಗೆರೆ ಜಿಲ್ಲೆಯ ಲಕ್ಷಾಂತರ ಭಕ್ತರು ತೆಪ್ಪೋತ್ಸವಕ್ಕೆ ಆಗಮಿಸಿ, ತಿಪ್ಪೇರುದ್ರಸ್ವಾಮಿಗಳ ಮಹಿಮೆಯನ್ನು ಕಣ್ಣದುಂಬಿಕೊಂಡರು. ದೂರದ ಊರುಗಳಿಂದ ಆಗಮಿಸಿದ ಭಕ್ತರು ಪೌಳಿ(ಡೇರೆ)ಗಳನ್ನು ನಿರ್ಮಿಸಿಕೊಂಡು, ತಾವು ತಂದ ಬುತ್ತಿಯನ್ನು ತಿಂದು, ತಿಪ್ಪೇರುದ್ರಸ್ವಾಮಿಗೆ ಹಣ್ಣು ಕಾಯಿ ಮಾಡಿಸಿ ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು.

 

 

ಹತ್ತಿ ಮತ್ತು ಬೂರುಗದ ಮರಗಳ ದಿಮ್ಮಿಗಳಿಂದ ತಯಾರಿಸಿದ ಗುರುತಿಪ್ಪೇರುದ್ರಸ್ವಾಮಿ ತೆಪ್ಪದಲ್ಲಿ ನಿಶಾನಿಪಟ, ದೇವಾಲಯದ ನಗಾರಿ, ಪಂಚ
ಲೋಹದ ಕಳಸ ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳನ್ನು ಇಟ್ಟು 50ಕ್ಕೂ ಹೆಚ್ಚು ಜನರು ದೊಡ್ಡ ಬಿದಿರಿನ ಗಳಗಳಿಂದ ಒಡ್ಡು ಹಾಕಿ ತೆಪ್ಪ ನಡೆಸಿದರು.ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇದರ ನೇತೃತ್ವ ವಹಿಸಿದ್ದರು. ರಾಜ್ಯದಲ್ಲಿಯೇ ಅತಿದೊಡ್ಡ ತೆಪ್ಪೋತ್ಸವ ಜನಪದರ ಸಾಂಪ್ರದಾಯಿಕ ಹಬ್ಬವಾಗಿ ಮಾರ್ಪಡು ಆಗಿದೆ.

*ಜಲಸಂರಕ್ಷಣೆ, ನವಕಾರ್ಮಿಕ ನೀತಿಗೆ ಮುನ್ನುಡಿ ಬರೆದ ಅವಧೂತ*

ಅವಧೂತ ಪರಂಪರೆಗೆ ಸೇರಿದ ಗುರುತಿಪ್ಪೇರುದ್ರಸ್ವಾಮಿ ನಾಯಕನಹಟ್ಟಿಗೆ ಬಂದು ನೆಲೆಸಿ ಈ ಭಾಗದ ಸಾಮಾನ್ಯ ಜನರ ಸಂಕಷ್ಟಗಳನ್ನು ಪರಿಹರಿಸಿದರು. ಬರಗಾಲ ಹಾಗೂ ನೀರಿನ ಬವಣೆ ಅನುಭವಿಸುತ್ತಿದ್ದ ಪ್ರದೇಶದಲ್ಲಿ ಜಲಸಂರಕ್ಷಣೆ ಮಹತ್ವ ಸಾರಿ ಕೆರೆ ಕಟ್ಟೆ ನಿರ್ಮಿಸಿ ಬಯಲು ಸೀಮೆಯಲ್ಲಿ ಹಸಿರು ನಳನಳಿಸುವಂತೆ ಮಾಡಿದರು. ತಿಪ್ಪೇರುದ್ರಸ್ವಾಮಿಗಳು ನಾಯಕನಹಟ್ಟಿ ಸಮೀಪದಲ್ಲಿ ಹಿರೇಕೆರೆ, ಚಿಕ್ಕಕೆರೆ, ರಾಮಸಾಗರಕೆರೆ, ಭೀಮನಕೆರೆ, ಮನುಮೈನಹಟ್ಟಿ ಹೊಸಕೆರೆ ಸೇರಿದಂತೆ 5 ಕೆರೆಗಳನ್ನು ಕಟ್ಟಿಸಿದರು. ಮಹಾದೇವಪುರ, ಗೌರಿಪುರ, ಗಿಡ್ಡಾಪುರ, ಕುದಾಪುರ, ಕಾಶಿಪುರ ಎಂಬ 5 ಪುರಗಳನ್ನು ನಿರ್ಮಿಸಿದರು. ಕೆರೆ ನಿರ್ಮಿಸುವ ವೇಳೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಅನುಸರಿಸಿದ ತಿಪ್ಪೇರುದ್ರಸ್ವಾಮಿಗಳು ಗರ್ಭಿಣಿ ಮಹಿಳೆ ಕೆಲಸಕ್ಕೆ ದ್ವಿಗುಣ ಕೂಲಿ ನೀಡಿದರು. ಇದು ಈಗಿನ ಕಾರ್ಖಾನೆಗಳಲ್ಲಿ ನೀಡುವ ಓಟಿ(ಓವರ್ ಟೈಮ್ ಡ್ಯೂಟಿ) ಕಲ್ಪನೆ ಹೋಲುತ್ತದೆ. ಕಾರ್ಮಿಕ ಶ್ರಮ ಗೌರವಿಸುವ ಮೂಲಕ ಕಾಯಕ ತತ್ವವನ್ನು ಪರಿಪಾಲಿಸಿದರು. ಜನರಲ್ಲಿ ಭಕ್ತಿ ಸಾಮರಸ್ಯ ಮೂಡಿಸಿದ ಅವಧೂತ ತಿಪ್ಪೇರುದ್ರಸ್ವಾಮಿಗಳ ತೆಪ್ಪೋತ್ಸವದಲ್ಲಿ ಜಾತಿ ಭೇದ ಮರೆತು ಜನರು ಪಾಲ್ಗೊಳ್ಳುತ್ತಾರೆ. ಕೃಷಿ, ಪಶುಪಾಲನೆ, ಆಧ್ಯಾತ್ಮ, ಧ್ಯಾನ, ಸಮಾನತೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡರು. 17ನೇ ಶತಮಾನದಲ್ಲಿ ನಿರ್ಮಿಸಿದ ನಾಯಕನಹಟ್ಟಿ ಹಿರೆಕೆರೆಯು ಅಣೆಕಟ್ಟು ಮಾದರಿಯಲ್ಲಿದೆ. ಕೆರೆ ಏರಿಯು 1.2 ಕಿ.ಮೀ. ಉದ್ದ ಮತ್ತು 98 ಅಡಿ ಅಗಲ ಇದೆ. 809 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತದೆ. ಇದರಿಂದ 610 ಹೆಕ್ಟೇರ್ ಪ್ರದೇಶಕ್ಕೆ ನೀರು ಲಭಿಸುತ್ತದೆ. ಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ಜನರು ತೆಪ್ಪೋತ್ಸವ ನಡೆಸುತ್ತಾರೆ. ಕೆರೆಯಲ್ಲಿ ನೀರಿನ ಸಂಗ್ರಹವಿದ್ದು ಪ್ರತಿ ವರ್ಷವೂ ಕೊಡಿ ಬಿದ್ದರೆ ಮೂರು ವರ್ಷಗಳಿಗೊಮ್ಮೆ ತೆಪ್ಪೋತ್ಸವ ಜರುಗುತ್ತದೆ.

ತೆಪ್ಪೋತ್ಸವ ನಂತರ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಬೆಳ್ಳಿ ರಥೋತ್ಸವ ಜರುಗಲಿದೆ.

ಈ ಬಾರಿ ತೆಪ್ಪೋತ್ಸವದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯಖಾತೆ ಸಚಿವ ಎ.ನಾರಾಯಣ ಸ್ವಾಮಿ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ,ಜಿಲ್ಲಾಧಿಕಾರಿ ದಿವ್ಯಫ್ರಭು.ಜಿ.ಆರ್.ಜೆ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *