ಚಿತ್ರದುರ್ಗದ ಮುರುಘಾ ಮಠಕ್ಕೆ ಸರ್ಕಾರದ ಆಡಳಿತಾಧಿಕಾರಿ ನೇಮಕ
ಮುರುಘಾ ಶರಣರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶರಣರು ಕಳೆದ ನಾಲ್ಕು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದು, ಆಡಳಿತ ಹಾಗೂ ಹಣಕಾಸಿನ ವ್ಯವಹಾರವೂ ನಡೆಸಲು ಬಹಳಷ್ಟು ಕಷ್ಟವಾಗುತ್ತಿದೆ. ಇದರಿಂದ ಅವರ ಜಾಗಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬಹುದೇ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ನೀಡಿದ್ದರು. ಆದರಂತೆ ಸರ್ಕಾರವೂ ಕೂಡ ಅಡ್ವೋಕೇಟ್ ಜನರಲ್ ಅವರನ್ನು ಆಡಳಿತಾಧಿಕಾರಿಯನ್ನು ನೇಮಿಸಲು ಅಭಿಪ್ರಾಯವನ್ನು ಕೇಳಿತ್ತು. ಸರ್ಕಾರದ ಮನವಿಯನ್ನು ಪರಿಶೀಲಿಸಿದ ಅಡ್ವೋಕೇಟ್ ಜನರಲ್ ಅವರು ಸಾರ್ವಜನಿಕ ಹಣ ಮತ್ತು ಆಸ್ತಿ ದುರ್ಬಳಕೆ ಆಗುವುದನ್ನು ತಡೆಯಲು ಹಾಗೂ ಆಡಳಿತವು ಸುಗಮವಾಗಿ ನಡೆಯಲು ಆಡಳಿತಾಧಿಕಾರಿಯನ್ನು ನೇಮಿಸಬಹುದು ಎಂದು ಅಭಿಪ್ರಾಯವನ್ನು ನೀಡಿದ್ದಾರೆ. ಇದರಿಂದ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಎಸ್ ವಿ ವಸ್ತ್ರದ್ ಅವರನ್ನು ಮುರುಘಾ ಮಠಕ್ಕೆ ಸರ್ಕಾರದವತಿಯಿಂದ ನೂತನ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶವನ್ನು ಹೊರಡಿಸಿದೆ. ಈಗಾಗಲೇ ಮುರುಘಾ ಶರಣರು ತಮ್ಮಅನುಪಸ್ಥಿತಿಯಲ್ಲಿ ನಿವೃತ್ತ ನ್ಯಾಯಾಧೀಶರಾದ ವಸ್ತ್ರದ್ ಮಠ್ ಅವರನ್ನು ನೇಮೀಸಿದ್ದು, ಅವರೇ ಆಡಳಿತವನ್ನು ನಡೆಸಿಕೊಂಡು ಹೋಗುತ್ತಿದ್ದು, ಸರ್ಕಾರ ಇದೀಗ ಎಸ್ ವಿ ವಸ್ತ್ರದ್ ಅವರನ್ನು ನೂತನವಾಗಿ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಮಾಡಿದೆ. ಇದರಿಂದ ಇನ್ನಾದರೂ ಮಠದ ಆಡಳಿತ ಯಾವುದೇ ಗೊಂದಲವಿಲ್ಲದೆ ನಡೆಯಬಹುದೇ ಎಂದು ಕಾದು ನೋಡಬೇಕಿದೆ