ಹಿರಿಯೂರು ತಾಲ್ಲೂಕಿನ ಐಮಂಗಲ ಪೋಲಿಸ್ ಠಾಣೆ, ಗ್ರಾಮಾಂತರ ಪೋಲಿಸ್ ಠಾಣೆ ಕರ್ತವ್ಯ ನಿರ್ವಹಿಸಿ ನಂತರ ಬಡ್ತಿ ಪಡೆದು ಅಜ್ಜಂಪುರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ಲಿಂಗರಾಜು (42) ವರ್ಷ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಹೃದಯಾಘಾತ ಎಂದರೂ ಸಹ, ವೈಯುಕ್ತಿಕ ಜೀವನದಲ್ಲಿ ಎಲ್ಲವೂ ಸರಿ ಇಲ್ಲದೆ ಬಹಳಷ್ಟು ನೋವು ಅನುಭವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅವರ ಸಾವಿನ ಸುತ್ತ ಅನುಮಾನದ ಹುತ್ತ ಸೃಷ್ಟಿಸಿದ್ದು, ಸಾವಿನ ರಹಸ್ಯ ಇದೀಗ ಹೊರಬರಬೇಕಿದೆ.
ಬೆಂಗಳೂರಿನಿಂದ ಚಿತ್ರದುರ್ಗ ನಗರಕ್ಕೆ ಬಂದು ನಗರದ ನವೀನ್ ರೆಸಿಡೆನ್ಸಿಯಲ್ಲಿ ಲಿಂಗರಾಜು ಅವರು ಲಾಡ್ಜ್ ಮಾಡಿಕೊಂಡು ತಂಗಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತಂತೆ. ಹೊಟೇಲ್ ನವರು ಮಹಿಳಾ ಠಾಣೆಗೆ ತಿಳಿಸಿದ್ದು,ಅವರನ್ನು ಹತ್ತಿರದ ಬಸವೇಶ್ವರ ಆಸ್ಪತ್ರೆಗೆ ತಕ್ಷಣ ಅವರನ್ನು ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹಿಂದೆ ಅಜ್ಜಂಪುರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಂದರ್ಭದಲ್ಲಿ ಬಂಗಾರ ಕಳವು ಪ್ರಕರಣದಲ್ಲಿ ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಅವರನ್ನು ಅಮಾನತ್ತು ಮಾಡಲಾಗಿತ್ತು. ಈ ಪ್ರಕರಣ ರಿವೊಕ್ ಆಗಿದ್ದು, ಅದಕ್ಕೆ ಬಿ ರಿಪೋರ್ಟ್ ಹಾಕಿಸಲು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲಾ ವಿಚಾರಗಳಿಂದ ಲಿಂಗರಾಜು ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಮತ್ತೊಂದು ಕಡೆ ಮೃತನ ಕುಟುಂಬದ ಸದಸ್ಯರೊಬ್ಬರಿಗೆ ಅನಾರೋಗ್ಯ ಸಮಸ್ಯೆ ಇತ್ತು ಎನ್ನಲಾಗಿದ್ದು, ಚಿಕಿತ್ಸೆ ಕೊಡಿಸಲು ಸಾಕಷ್ಟು ಸಾಲ ಮಾಡಿಕೊಂಡಿದ್ದರು ಈ ಎಲ್ಲ ವಿಚಾರಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ಪೋಲಿಸ್ ತನಿಖೆಯಿಂದ ತಿಳಿದು ಬರಬೇಕಿದೆ.