ಚಿತ್ರದುರ್ಗ: ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನಿನ್ನೆ ಸಂಜೆ ಪೊಲೀಸರಿಬ್ಬರು ಪ್ರಕರಣವೊಂದರ ವಿಚಾರಣೆಗಾಗಿ ಆತನನ್ನು ಠಾಣೆಗೆ ಕರೆದೊಯ್ದಿದ್ದರು. ಆದ್ರೆ,ಆ ವ್ಯಕ್ತಿ ಠಾಣೆಯಲ್ಲೇ ರಾತ್ರಿ ಪ್ರಾಣ ಬಿಟ್ಟಿದ್ದಾನೆ. ಇದನ್ನು ಲಾಕ್ ಡೆತ್ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೋಟೋದಲ್ಲಿ ಕಾಣ್ತಾ ಇರೋ ವ್ಯಕ್ತಿ ಹೆಸರು ಶಿವಾಜಿ ರಾವ್ ಅಂತ. ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆ ನಿವಾಸಿ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಿವಾಜಿ ರಾವ್ ಇತ್ತೀಚೆಗೆ ಗಾಂಜಾ ಸೇವನೆ ಜೊತೆಗೆ ಮಾರಾಟ ಕೂಡ ಮಾಡುತ್ತಿದ್ದ ಎನ್ನಲಾಗಿದ್ದು, ಐಎಸ್ಡಿ ಪೊಲೀಸರು ಗಾಂಜಾ ಸಮೇತ ಮಂಗಳವಾರ ಸಂಜೆ ಶಿವಾಜಿ ರಾವ್ನನ್ನು ಬಂಧಿಸಿ ನಗರ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಈ ವೇಳೆ ಶಿವಾಜಿ ರಾವ್ ಠಾಣೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಮಫ್ತಿಯಲ್ಲಿ ಮನೆ ಬಂದಿದ್ದ ಪೊಲೀಸರು ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಕೊಡದೆ ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ನೆಪದಲ್ಲಿ ಠಾಣೆಯಲ್ಲಿ ಹೊಡದು ಸಾಯಿಸಿದ್ದಾರೆ ಎಂದು ಮೃತ ವ್ಯಕ್ತಿಯ ಪತ್ನಿ ಗೀತಾ ಬಾಯಿ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಶಿವಾಜಿ ರಾವ್ ಗಾಂಜಾ ಮಾರಾಟ ಮಾಡುತ್ತಿದ್ದು, 59 ಗ್ರಾಂ ಗಾಂಜಾ ಸಮೇತ ಐಎಸ್ಡಿ ಪೊಲೀಸರು ವಶಕ್ಕೆ ಪಡೆದು ನಗರ ಠಾಣೆ ವ್ಯಾಪ್ತಿಯಲ್ಲಿ ವಿಚಾರಣೆಗೆ ಕರೆತಂದಿದ್ರು. ಶಿವಾಜಿ ರಾವ್ ಮೇಲೆ ಯಾವುದೇ ಪೊಲೀಸ್ ಸಿಬ್ಬಂದಿ ಕೈ ಮಾಡಿಲ್ಲ. ಆರೋಪಿಗೆ ಪಿಡ್ಸ್ ಬಂದು ಕೂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದಾನೆ. ಆಗ ನಮ್ಮ ಸಿಬ್ಬಂದಿ ಆರೋಪಿ ಕೈಗೆ ಕಬ್ಬಿಣದ ಕೀ ಕೊಟ್ಟು ಪ್ರಾಥಮಿಕ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಬಳಿಕ ಹೆಚ್ಚುವರಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಾಗ ಆರೋಪಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅರೋಪಿ ಸಾವನ್ನಪಿದ ವಿಚಾರ ತಿಳಿಯುತ್ತಿದ್ದಂತೆ ಠಾಣೆಗೆ ಭೇಟಿ ಕೊಟ್ಟು ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಿದ್ದು, ನಮ್ಮ ಸಿಬ್ಬಂದಿ ಯಾವುದೇ ಹಲ್ಲೆಯಾಗಲಿ, ಹೊಡಿಯೋದು, ಬಡಿಯೋದು ಮಾಡಿಲ್ಲ. ಆದರೂ 302 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.ಸಿಐಡಿ ಅಧಿಕಾರಿಗಳು ಚಿತ್ರದುರ್ಗ ನಗರ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಕುಟುಂಬದವರ ಮತ್ತು ಪೊಲೀಸರ ಮಾಹಿತಿ ಪಡೆದಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದು ಪೊಲೀಸರು ಮಾಡಿರುವ ಲಾಕಪ್ ಡೆತೋ ಅಥವಾ ಸಹಜ ಸಾವೋ ಎಂಬುದು ಸಿಐಡಿ ತನಿಖೆಯಿಂದ ಹೊರ ಬೀಳಬೇಕಿದೆ….
ಸಂಯುಕ್ತವಾಣಿ