ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬೆಂಗಳೂರಿನಿಂದ ಗದಗ ಜಿಲ್ಲೆಯ ಸಂಕೇಶ್ವರ ಕಡೆಗೆ ಪ್ರಯಾಣಿಸುತ್ತಿದ್ದಾಗ ಹೆಲಿಕ್ಯಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಹಿರಿಯೂರಿನ ಆರನಕಟ್ಟೆ ಗ್ರಾಮದ ವಾಣಿ ವಿಲಾಸ ಪ್ರೌಢಶಾಲಾ ಆವರಣದಲ್ಲಿ ಹೆಲಿಕಾಪ್ಟರ್ ನ್ನು ತುರ್ತು ಭೂ ಸ್ಪರ್ಶ ಮಾಡಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಚಿವರು ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ 10.15 ಕ್ಕೆ ಬೆಂಗಳೂರಿನ ಜಕ್ಕೂರು ಏರೋಡ್ರಂನಿಂದ ಟೇಕಾಫ್ ಆಗಿತ್ತು. ಆರನಕಟ್ಟೆ ಬಳಿ 11.30ರ ಸಮಯದಲ್ಲಿ ಆರನಕಟ್ಟೆ ಬಳಿ ತುರ್ತು ಭೂಸ್ಪರ್ಶವಾಯಿತು.ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾದ ಬಳಿಕ ಸಚಿವರು ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದರು. ಈ ವೇಳೆ ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸಚಿವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ನಂತರ ಸಚಿವರು ಕಾರಿನ ಮೂಲಕ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.