ನಿಗಧಿಪಡಿಸಿರುವ ರಾಜಸ್ವದ ಗುರಿ ಸಾಧಿಸಿ: ಡಿಸಿ ವೆಂಕಟೇಶ್ ತಾಕೀತು

ರಾಜ್ಯ

ಗಣಿ ಗುತ್ತಿಗೆ: ನಿಗಧಿಪಡಿಸಿರುವ ರಾಜಸ್ವದ ಗುರಿ ಸಾಧಿಸಿ: ಡಿಸಿ ಟಿ.  ವೆಂಕಟೇಶ್

ಮುಖ್ಯ ಖನಿಜ ಮತ್ತು ಉಪ ಖನಿಜ ಗಣಿ ಗುತ್ತಿಗೆಗಳಿಗೆ ನಿಗಧಿಪಡಿಸಿರುವ, ರಾಜಸ್ವದ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಸಮಿತಿ, ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.
ಗಣಿ ಗುತ್ತಿಗೆಗಳಿಗೆ ನಿಗಧಿಪಡಿಸಿರುವ ರಾಜಸ್ವದ ಗುರಿಯನ್ನು ತಲುಪುವ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಪ್ರತ್ಯಾಜಿಸಲಾದ ಅಧಿಕಾರದಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ತಡೆಯುವ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಪ್ರಕರಣ ದಾಖಲಿಸಲು ಕ್ರಮವಹಿಸಬೇಕು ಎಂದು ಹೇಳಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಮಾತನಾಡಿ, ವೇದಾಂತ ಮೀನರಲ್ಸ್ ಅವರು ಗಣಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ ಕಾರಣ, ಇಲಾಖೆ ಗುರಿ ತಲುಪಲು ಸಾಧ್ಯವಾಗಿರುವುದಿಲ್ಲ, ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ನಿಗಧಿಪಡಿಸಿರುವ ರಾಜಸ್ವ ಗುರಿ ತಲುಪಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

 

 

ತಿಂಗಳೊಳಗೆ ನಿರಾಪೇಕ್ಷಣ ಪತ್ರ ನೀಡಿ:ಜಿಲ್ಲಾ ವ್ಯಾಪ್ತಿಯಲ್ಲಿ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಮಂಜೂರಾತಿಗೆ 160 ಅರ್ಜಿಗಳು ಬಾಕಿ ಇದ್ದು, ಒಂದು ತಿಂಗಳೊಳಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಿರಾಪೇಕ್ಷಣ ಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಬಾಕಿ ಇರುವ ಅರ್ಜಿಗಳನ್ನು ಪಟ್ಟಿ ಮಾಡಿ ಮುಂದಿನ ಸಭೆಯೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ ಹಾಗೂ ಪಟ್ಟಾ ಜಮೀನುಗಳಲ್ಲಿ ದಾಸ್ತಾನಿರಿಸಲಾಗಿರುವ ಕಬ್ಬಿಣದ ಅದಿರು ರಾಶಿಗಳನ್ನು ನಿಯಮಾನುಸಾರ ವಿಲೇಪಡಿಸಲು ಹಾಗೂ ಕಂದಾಯ, ಅರಣ್ಯ ಇಲಾಖೆ ವತಿಯಿಂದ ನಿರಾಪೇಕ್ಷಣ ಪತ್ರ ಸ್ವೀಕೃತಿಯಾದ ಪ್ರದೇಶಗಳಿಗೆ ಸಂಬಂಧಿಸಿದಂತೆ ನಿಯಾಮಾನುಸಾರ ಕ್ರಮವಹಿಸಲು ಸಭೆಯು ಅನುಮೋಧಿಸಿತು.
ಜಿಲ್ಲಾ ಮರಳು ಸಮಿತಿ: ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿನ ಪಟ್ಟಾ ಜಮೀನುಗಳಲ್ಲಿ ಮರಳು ಗಣಿ ಗುತ್ತಿಗೆ ಕೋರಿ ಸ್ವೀಕೃತಿಯಾದ ಅರ್ಜಿಗಳ ಮಂಜೂರಾತಿಗೆ ನಿಯಾಮಾನುಸಾರ ಕ್ರಮವಹಿಸಲು ಸಭೆಯು ಸೂಚಿಸಿತು.
ಜಿಲ್ಲೆಯ ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುವ ನದಿ ಪಾತ್ರದಲ್ಲಿ ಟೆಂಡರ್-ಕಂ-ಹರಾಜು ಮೂಲಕ ಮಂಜೂರು ಮಾಡಲಾದ ಮರಳು ಗಣಿ ಗುತ್ತಿಗೆ, ಮರಳು ಲೈಸೆನ್ಸ್ ಪ್ರದೇಶಗಳ ಅವಧಿಯು ಮುಕ್ತಾಯಗೊಂಡಿದ್ದು, ಕೆಲವೊಂದು ಮರಳು ಸ್ಟಾಕ್ ಯಾರ್ಡ್ ಪ್ರದೇಶಗಳಲ್ಲಿ ದಾಸ್ತಾನಿರುವ ಮರಳು ವಿಲೇವಾರಿ ಮಾಡುವ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಗುಣಮಟ್ಟದ ವರದಿ ಪಡೆದು ಕ್ರಮವಹಿಸಲು ಸಭೆಯು ಸೂಚಿಸಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂದರ್ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ, ಭೂ ವಿಜ್ಞಾನಿಗಳಾದ ನಯಾಜ್ ಖಾನ್, ಉಮಾಪತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *