ಬಿಜೆಪಿ ಗೆಲುವಿಗೆ ಹಿಂದುಳಿದವರು ಒಂದಾಗಿ

ರಾಜ್ಯ

ಚಿತ್ರದುರ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ.ಭಾವುಟ ಹಾರಿಸಬೇಕಾಗಿರುವುದರಿಂದ ಹಿಂದುಳಿದ ವರ್ಗದವರು ಸಂಘಟಿತರಾಗಬೇಕೆಂದು ಸಚಿವ ಭೈರತಿ ಬಸವರಾಜ್ ಕರೆ ನೀಡಿದರು.
ಗುಲ್ಬರ್ಗದಲ್ಲಿ ಇದೇ ತಿಂಗಳ 30 ರಂದು ನಡೆಯಲಿರುವ ಬಿಜೆಪಿ.ಹಿಂದುಳಿದ ವರ್ಗಗಳ ಮೋರ್ಚಾದ ಜಾಗೃತಿ ಸಮಾವೇಶದ ಅಂಗವಾಗಿ ಭಾರತೀಯ ಜನತಾಪಾರ್ಟಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಎಸ್.ಕೆ.ಎಸ್.ಸಮುದಾಯ ಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸಮಾವೇಶಕ್ಕೆ ಜಿಲ್ಲೆಯಿಂದ ಹದಿನೈದು ಸಾವಿರ ಜನ ಭಾಗವಹಿಸಬೇಕು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಸಮಾವೇಶ ಯಶಸ್ವಿಯಾಗಬೇಕು. ಅದಕ್ಕಾಗಿ ಹಿಂದುಳಿದವರು ಯಾರು ಸಮಾವೇಶಕ್ಕೆ ತಪ್ಪಿಸಿಕೊಳ್ಳಬಾರದು. ಚಿತ್ರದುರ್ಗದಲ್ಲಿ ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಿ ಇದುವರೆವಿಗೂ ನಿಗಮ ಮಂಡಳಿಗಳಿಗೆ ನೇಮಕ ಮಾಡಿಲ್ಲ ಎನ್ನುವ ಕೊರಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗಮನ ಸೆಳೆದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಳಿ ಮಾತನಾಡಿ ಚಿತ್ರದುರ್ಗಕ್ಕೆ ಆದ್ಯತೆ ನೀಡುತ್ತೇನೆಂದು ಭರವಸೆ ಕೊಟ್ಟರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದವರು ಜಾಸ್ತಿಯಿದ್ದಾರೆ. ಇಲ್ಲಿಯೇ ಸಮಾವೇಶ ನಡೆಯಬೇಕಿತ್ತು. ಆದರೆ ಪಕ್ಷದ ನಾಯಕರುಗಳು ಗುಲ್ಬರ್ಗದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ನಮ್ಮ ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ನೀಡಿದರು.
ಚುನಾವಣೆ ಎನ್ನುವುದು ಯುದ್ದವಿದ್ದಂತೆ ಸೈನಿಕರ ರೀತಿಯಲ್ಲಿ ಕೆಲಸ ಮಾಡಬೇಕು. ಗುಲ್ಬರ್ಗದಲ್ಲಿ ನಡೆಯುವ ಸಮಾವೇಶ ಜಿಲ್ಲೆಗೆ ಸವಾಲಿದ್ದಂತೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನು ಬಿಜೆಪಿ.ಗೆಲ್ಲಬೇಕು. ರಾಜ್ಯದಲ್ಲಿ 150 ಸೀಟುಗಳು ನಮ್ಮ ಪಕ್ಷಕ್ಕೆ ಸಿಗಬೇಕು. ನಿಗಮ ಮಂಡಳಿಗಳಿಗೆ ಒಬ್ಬರನ್ನು ನೇಮಕ ಮಾಡಿಲ್ಲ ಎನ್ನುವ ಅಸಮಾಧಾನ ನಮ್ಮ ಕಾರ್ಯಕರ್ತರಲ್ಲಿದೆ. ಜಿಲ್ಲೆಗೆ ಒಂದು ನಾಮಿನೇಟ್ ಕೂಡ ಆಗಿಲ್ಲ. ಈ ಸಂಬಂಧ ರಾಜ್ಯದ ನಾಯಕರುಗಳ ಜೊತೆ ಮಾತನಾಡಬೇಕೆಂದು ಸಚಿವ ಭೈರತಿ ಬಸವರಾಜ್‍ರವರಲ್ಲಿ ಮನವಿ ಮಾಡಿದರು.
ಬಿಜೆಪಿ.ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೇಲ ನರೇಂದ್ರಬಾಬು ಮಾತನಾಡುತ್ತ ಗುಲ್ಬರ್ಗದಲ್ಲಿ ಹಿಂದಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಯುತ್ತಿರುವುದರಿಂದ ಪ್ರತಿ ಬೂತ್‍ನಲ್ಲಿ ಸಭೆ ನಡೆಸಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಮುಖಂಡರುಗಳ ಮೇಲಿದೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಮತಗಳೆ ನಿರ್ಣಾಯಕ ಪಾತ್ರ ವಹಿಸಲಿವೆ. ಕೇಂದ್ರದಲ್ಲಿ 21 ಸಚಿವರು ಹಿಂದುಳಿದವರಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದವರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿದೆ. ಶೇ.27 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಹಿಂದುಳಿದವರಿಗೆ ನೀಡಿದೆ. ಕೌಶಲ್ಯವಿಲ್ಲದೆ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಔದ್ಯೋಗಿಕ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳೆಯರಿಗೆ ಪಕ್ಷದಲ್ಲಿ ಅವಕಾಶ ನೀಡದಿದ್ದರೆ ಸಾಮಾಜಿಕ ನ್ಯಾಯದಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಪಂಡಿತ್ ದೀನ್ ದಯಾಳ್ ಉಪಾಧ್ಯ ಅಂತ್ಯೋದಯದ ಕನಸು ಕಂಡಿದ್ದರು. ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆ ಮುಖ್ಯ. ಚುನಾವಣೆಯಲ್ಲಿ ಹಿಂದುಳಿದ ವರ್ಗದವರು ಅವಕಾಶದಿಂದ ವಂಚಿತರಾಗಬಾರದು. ಸಮಾವೇಶದ ಮೂಲಕ ಇಡಿ ರಾಜ್ಯಕ್ಕೆ ಒಳ್ಳೆಯ ಸಂದೇಶ ಹೋಗಬೇಕು. ಅಷ್ಟದಿಕ್ಕುಗಳಿಂದ ರಥ ಸಮಾವೇಶಕ್ಕೆ ಹೊರಡಲಿದೆ ಎಂದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ ಗುಲ್ಬರ್ಗದಲ್ಲಿ ನಡೆಯುವ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶದಲ್ಲಿ ಐದು ಲಕ್ಷ ಜನರನ್ನು ಸೇರಿಸುವ ತಯಾರಿ ನಡೆಯುತ್ತಿದೆ. 2023 ರ ವಿಧಾನಸಭೆ ಚುನಾವಣೆಗೆ ಈ ಸಮಾವೇಶ ದಿಕ್ಸೂಚಿಯಾಗಲಿದೆ. ಪ್ರತಿ ಬೂತ್‍ಗಳಲ್ಲಿನ ಪ್ರಮುಖರು ಸೇರಬೇಕು. ರಾಹುಲ್‍ಗಾಂಧಿ ನಡೆಸುತ್ತಿರುವ ಭಾರತ್‍ಜೋಡೋ ಯಾತ್ರೆ ಹಾಸ್ಯಾಸ್ಪದವಾಗಿದೆ. ಎಲ್ಲಾ ಬೂತ್‍ಗಳಿಂದ ಯಾರು ತಪ್ಪಿಸದೆ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಸೂಚಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡುತ್ತ ಜಿಲ್ಲೆಯಲ್ಲಿರುವ ಪ್ರತಿ ಮಂಡಲದ ಸಮುದಾಯದ ಪ್ರಮುಖರು ಹಿಂದುಳಿದವರು ಸಮಾವೇಶದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಎಲ್ಲಾ ಹಿಂದುಳಿದವರನ್ನು ಗುರುತಿಸಿ ಸಮಾವೇಶಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎಂದು ವಿನಂತಿಸಿದರು.
ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬಣ್ಣ ಮಾತನಾಡಿ ನಿಮ್ಮ ನಿಮ್ಮ ಮಂಡಲಗಳಲ್ಲಿ, ಮಹಾಶಕ್ತಿ ಕೇಂದ್ರಗಳಲ್ಲಿ ಪ್ರಮುಖರು ಸುತ್ತಾಡಿ ಹಿಂದುಳಿದ ವರ್ಗದವರನ್ನು ಗುಲ್ಬರ್ಗದ ಸಮಾವೇಶಕ್ಕೆ ಕರೆತರುವ ಕೆಲಸ ಮಾಡಬೇಕು. ಒಂದೊಂದು ವಿಧಾನಸಭಾ ಕ್ಷೇತ್ರದಿಂದ ಎರಡು ಸಾವಿರ ಜನರು ಸಮಾವೇಶಕ್ಕೆ ಬರಬೇಕು ಎಂದು ಕೋರಿದರು.
ಬಿಜೆಪಿ.ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್ ವೇದಿಕೆಯಲ್ಲಿದ್ದರು

 

 

Leave a Reply

Your email address will not be published. Required fields are marked *