ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿಲ್ಲ, ಕರೆದಿಲ್ಲ ಮಾಡಿಲ್ಲ, ನಾನ್ಯಾಕೆ ಬರಲಿ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಗೆ ತೆರಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿರಾಕರಿಸಿದರು.
ಸಭೆಗೆ ನನ್ನನ್ನು ಕರೆದಿಲ್ಲ, ಮಾಡಿಲ್ಲ. ಹೀಗಿರುವಾಗ ನಾನ್ಯಾಕೆ ಸಭೆಗೆ ಹೋಗಬೇಕು’ ಎಂದು ಅವರು ಅಸಮಾಧಾನ ಹೊರಹಾಕಿದರು. ನಗರದಲ್ಲಿ ನಿನ್ನೆ (ಸೆ.13) ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿತ್ತು. ಈ ವೇಳೆ ಎದುರುಬದುರು ಹಾಲ್ನಲ್ಲಿ ಶಾಸಕಾಂಗ ಸಭೆ ಹಾಗೂ ಭಾರತ್ ಜೋಡೋ ಪಾದಯಾತ್ರೆಗೆ ಮೀಟಿಂಗ್ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಶಾಸಕಾಂಗ ಸಭೆಗೆ ಆಗಮಿಸುವ ವೇಳೆಗೆ ಭಾರತ್ ಜೋಡೊ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಡಿ.ಕೆ.ಶಿವಕುಮಾರ್ ಕುಳಿತಿದ್ದರು.
ಈ ವೇಳೆ ಸಿದ್ದರಾಮಯ್ಯ ಅವರನ್ನು ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಮಾಜಿ ಸಚಿವರ ಸಭೆಗೆ ಆಗಮಿಸುವಂತೆ ಕಾಂಗ್ರೆಸ್ ನಾಯಕರಾದ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಆಹ್ವಾನಿಸಿದರು. ಆದರೆ ಸಿದ್ದರಾಮಯ್ಯ ಈ ಆಹ್ವಾನವನ್ನು ನೇರವಾಗಿ ತಿರಸ್ಕರಿಸಿದರು. ‘ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿಲ್ಲ, ಕರೆದಿಲ್ಲ ಮಾಡಿಲ್ಲ, ನಾನ್ಯಾಕೆ ಬರಲಿ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಿದ್ದರಾಮಯ್ಯ ಅವರಿಗೆ ಸಭೆಯ ಬಗ್ಗೆ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಸಮಜಾಯಿಷಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.