ಸರ್ಕಾರಿ ಪಾಲಿಟಕ್ನಿಕ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರೊಬ್ಬರ ಕಾರಿನ ಕಿಟಕಿಯ ಗಾಜು ಹೊಡೆದು ಕಾರಿನಲ್ಲಿದ್ದ 2 ಲಕ್ಷ ರೂಪಾಯಿ ಹಣ. ದೋಚಿಪರಾರಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಎಂ ವೈ ರವಿ ಎನ್ನುವವರು
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಬೋಧಿಸುತ್ತಿದ್ದು, ಇವರು ಪರಿಸರ ಬಿಲ್ಡಿಂಗ್ ನಲ್ಲಿರುವ ಎಸ್ ಬಿ ಐ ಬ್ಯಾಂಕ್ ಗೆ ಎರಡು ಲಕ್ಷ ಹಣ ಕಟ್ಟಲು ತೆಗೆದುಕೊಂಡು ಹೋಗಿದ್ದರು. ಆದರೆ ಅದು ಊಟದ ಸಮಯವಾಗಿದ್ದರಿಂದ ಅಲ್ಲಿಂದ ನೇರವಾಗಿ ಕಾಲೇಜಿಗೆ ಬಂದಿದ್ದು, ಕಾರನ್ನು ಕಾಲೇಜಿನ ಆವರಣದಲ್ಲಿ ನಿಲ್ಲಿಸಿ ಸಹಿ ಮಾಡಿ ಬರಲು ಒಳಗೆ ಹೋಗಿದ್ದಾರೆ. ಇದೆಲ್ಲವನ್ನು ಗಮನಿಸುತ್ತಿದ್ದ ಯಾರೊ ದುಷ್ಕರ್ಮಿಯೊಬ್ಬ ಅವರು ಒಳಗೆ ಹೋಗುತ್ತಿದ್ದಂತೆ ಕಾರಿನ ಗಾಜನ್ನು ಹೊಡೆದು ಹಾಕಿ ಕಾರಿನಲ್ಲಿದ್ದ ಎರಡು ಲಕ್ಷ ರೂಪಾಯಿ ಹಣ ಎಗರಿಸಿಕೊಂಡು ಹೋಗಿದ್ದಾನೆ. ಇದರ ಬಗ್ಗೆ ರವಿಕುಮಾರ್ ಅವರು ಬಡಾವಣೆ ಠಾಣೆಗೆ ದೂರು ನೀಡಿದ್ದು, ಬಡಾವಣೆ ಠಾಣೆಯ ಪಿಎಸ್ಐ ಗೀತಮ್ಮ ಅವರೊಂದಿಗೆ ಪೋಲಿಸರು ಕಾಲೇಜಿನ ಆವರಣಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಬೆರಳಚ್ಚು ತಜ್ಞರನ್ನು ಕರೆಯಿಸಿದ್ದು, ಅವರೂ ಕೂಡ ಗಾಜಿನ ಮೇಲಿನ ಬೆರಳಚ್ಚುಗಳನ್ನು ಪಡೆದುಕೊಂಡಿದ್ದಾರೆ, ನಂತರ ಶ್ವಾನ ದಳದ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದು, ನಾಯಿಯೂ ಕೂಡ ಅವರು ಓಡಾಡಿರುವ ಕಡೆ ಸುತ್ತಾಡಿ ಬಂದು ಮತ್ತೆ ಕಾಲೇಜಿನಲ್ಲಿಯೇ ನಿಂತಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ಪರಿಶೀಲನೆ ನಡೆಸಿ ಆರೋಪಿಯ ಸೆರೆಗೆ ಬಲೆ ಬೀಸಿದ್ದಾರೆ.