ಚಿತ್ರದುರ್ಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಾಮಕಲ್ ಗ್ಯಾರೇಜ್ ಬಳಿ ರಸ್ತೆ ತಡೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ರೈತ ವಿರೋಧಿ ಕಾಯ್ದೆ ವಿರೋಧಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಬೆಳಗಿನಿಂದಲೇ ಬಂದ್ ಆರಂಭವಾಗಿತ್ತು. ಕೆಲವು ಅಂಗಡಿ ಮುಂಗಟ್ಟುಗಳು ಬಾಗಿಲು ತೆಗೆದಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಬಾಗಿಲು ಹಾಕಿಸಿದರು. ವಾಹನಗಳನ್ನ ತಡೆದು ಬಂದ್ ಗೆ ಬೆಂಬಲ ನೀಡುವಂತೆ ಒತ್ತಾಯಿಸಿದರು.
ಇದರ ನಡುವೆ ಪೋಲಿಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಕೂಡ ಆಯಿತು. ನಂತರ ರೈತ ಸಂಘಟನೆಗಳ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಬಂಡೆಗಳನ್ನು ತಲೆ ಮೇಲೆ ಹೊತ್ತು ಪ್ರತಿಭಟಿಸಿದರೆ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕೈ ಗಳನ್ನು ತಾವೇ ಕಟ್ಟಿಕೊಂಡು ವಿನೂತನವಾಗಿ ಪ್ರತಿಭಟಿಸಿದರು.
ನಂತರ ಪೋಲಿಸರ ಕಣ್ಣು ತಪ್ಪಿಸಿ ಕಾಂಗ್ರೆಸ್ ನ 20 ಕ್ಕೂ ಹೆಚ್ಚು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ನಾಮಕಲ್ ಗ್ಯಾರೇಜ್ ಬಳಿ ರಸ್ತೆ ತಡೆದು ಪ್ರತಿಭಟಿಸಿದರು. ರಸ್ತೆ ತಡೆ ನಡೆಸುತ್ತಿದ್ದವರನ್ನು ಪೋಲಿಸರು ಬಂಧಿಸಿ ಕರೆದುಕೊಂಡು ಹೋದರು.
ಸಂಯುಕ್ತವಾಣಿ