ಮೈಸೂರು: ನ್ಯಾಯಕ್ಕಾಗಿ ನ್ಯಾಯಾಲಯದ ಆವರಣದಲ್ಲಿ ಮಹಿಳೆಯು ಬಿದ್ದು ಹೊರಳಾಡಿದ ಘಟನೆ ಮನಕಲಕುವಂತಿತ್ತು.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ನ್ಯಾಯಾಲಯದ ಮುಂದೆ ಪತಿಯಿಂದ ಮೋಸವಾಗಿರುವ ಹಿನ್ನೆಲೆಯಲ್ಲಿ ಪತ್ನಿ ಲಕ್ಷ್ಮಿ ಹಾಗೂ ಮಗಳು ನ್ಯಾಯಕ್ಕಾಗಿ ಹಾಜರಾಗಿದ್ದರು. ಈ ಸಮಯದಲ್ಲಿ ಪತಿ ಸತೀಶ್ ಕೂಡ ಅಲ್ಲಿಗೆ ಬಂದಿದ್ದು, ಅಲ್ಲಿ ಲಕ್ಷ್ಮಿ ಹಾಗೂ ಮಗಳನ್ನ ಕಂಡ ಕೂಡ ಅಶ್ಲೀಲವಾಗಿ ಬೈಯಲು ಮುಂದಾಗಿದ್ದಾನೆ. ಇದನ್ನು ಸಹಿಸದೆ ಹಾಗೂ ತನಗಾಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವಂತೆ ಮಹಿಳೆ ನ್ಯಾಯಾಲಯದ ಆವರಣದಲ್ಲಿ ಬಿದ್ದು ಹೊರಳಾಡಿದ ಘಟನೆ ನಡೆಯಿತು.
ಪತಿ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಸತೀಶ್ ಹಾಗೂ ಲಕ್ಷ್ಮಿ ಇಬ್ಬರಿಗೂ 2005 ರಲ್ಲಿ ವಿವಾಹವಾಗಿತ್ತು. ಹೆಣ್ಣು ಮಗು ಜನಿಸಿದ ಕಾರಣ ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ, ಇದರ ಜೊತೆಗೆ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಲಕ್ಷ್ಮಿಗೆ ವಿಚ್ಛೇದನವೂ ನೀಡಿಲ್ಲ. ಜೀವಾನಂಶವೂ ನೀಡುತ್ತಿಲ್ಲ.
ಇದರ ಬಗ್ಗೆ ನ್ಯಾಯಾ ಕೇಳಲು ನ್ಯಾಯಾಲಯಕ್ಕೆ ಹಾಜರಾಗಿದ್ದ ಸಮಯದಲ್ಲಿ ತಂದೆಯನ್ನು ಕಂಡು ಮಾತನಾಡಿ ತನ್ನ ಭವಿಷ್ಯಕ್ಕೆ ನೆರವಾಗುವಂತೆ ಮನವಿಮಾಡಿದ ಮಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ ಪತ್ನಿಗೂ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಿ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಕ್ಷ್ಮಿ ನ್ಯಾಯಾಲಯದ ಆವರಣದಲ್ಲಿ ಬಿದ್ದು ಹೊರಳಾಡಿದ ಹಾಗೂ ನ್ಯಾಯಕ್ಕಾಗಿ ಅಲುಬಿದ ಕರುಣಾಜನಕ ಘಟನೆ ನಡೆಯಿತು.
ಸಂಯುಕ್ತವಾಣಿ