ಚಿತ್ರದುರ್ಗ : ಚಿತ್ರದುರ್ಗ ಟೌನ್ ಕೋ–ಆಪರೇಟಿವ್ ಸೊಸೈಟಿ 2023-24 ನೇ ಸಾಲಿನಲ್ಲಿ ಹದಿನಾಲ್ಕು ಲಕ್ಷದ 38 ಸಾವಿರದ ಒಂಬೈನೂರ ಎಪ್ಪತ್ತೈದು ರೂ.ಗಳ ಲಾಭದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಹೇಳಿದರು.
ಶ್ರೀಮತಿ ಕಾಟಮ್ಮ ಪಟೇಲ್ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚಿತ್ರದುರ್ಗ ಟೌನ್ ಕೋ–ಆಪರೇಟಿವ್ ಸೊಸೈಟಿಯ 2023-24 ನೇ ಸಾಲಿನ
107 ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ನೂರ ಏಳು ವರ್ಷಗಳ ಇತಿಹಾಸವಿರುವ ನಮ್ಮ ಸೊಸೈಟಿಯಲ್ಲಿ ಕಂಪ್ಯೂಟರ್, ಲಾಕರ್, ಇ.ಸ್ಟಾಂಪಿಂಗ್ ಸೌಲಭ್ಯವಿದೆ. ವಾಣಿಜ್ಯ ಮಳಿಗೆಗಳಿಂದ ಸೊಸೈಟಿಗೆ ತಿಂಗಳಿಗೆ
ಇಪ್ಪತ್ತೈದರಿಂದ ಮೂವತ್ತು ಲಕ್ಷ ರೂ.ಗಳ ವರಮಾನ ಬರುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಭವನ ನಿರ್ಮಾಣ ಮಾಡಲಾಗುವುದು. ಸದಸ್ಯರುಗಳಿಂದ ಡೆಪಾಸಿಟ್ ಸಂಗ್ರಹಿಸಲು ಮನೆ ಮನೆಗೆ ಬರುತ್ತೇವೆ. ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಕೋರಿದರು.
ಎ.ಟಿ.ಎಂ.ತೆರೆಯಬೇಕೆಂಬ ಬೇಡಿಕೆ ಇದೆ. ಸೊಸೈಟಿ ಸದೃಢವಾಗಿ ಬೆಳೆದಾಗ ನೋಡೋಣ. ಈಗ ಹದಿನಾರು ಪರ್ಸೆಂಟ್ ಡೆವಿಡೆಂಟ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 25 ಪರ್ಸೆಂಟ್ ನೀಡಲು ಪ್ರಯತ್ನಿಸುತ್ತೇನೆ. ಒಂದುವರೆ ಪರ್ಸೆಂಟ್ ಹೆಚ್ಚಿಗೆ ಬಡ್ಡಿ ಕೊಡಲಾಗುತ್ತಿದೆ. ಬೇರೆ ಯಾವ ಸೊಸೈಟಿಗಳಲ್ಲೂ ಈ ಸೌಲಭ್ಯವಿಲ್ಲ ಎಂದು ತಿಳಿಸಿದರು.
ದಿನಾಂಕ: 31-3-2024 ರ ಅಂತ್ಯಕ್ಕೆ ನಲವತ್ತೊಂಬತ್ತು ಲಕ್ಷದ ನಲವತ್ತೆಂಟು ಸಾವಿರ ರೂ.ಗಳ ಪಾವತಿಯಾದ ಷೇರು ಬಂಡವಾಳವಿದ್ದು, 2607 ಸದಸ್ಯರುಗಳಿದ್ದಾರೆ.
ಆಪದ್ಧನ ನಿಧಿ ಹದಿನೇಳು ಲಕ್ಷ ಅರವತ್ತೇಳು ಸಾವಿರದ 706 ರೂ. ಹಾಗೂ ಇತರೆ ನಿಧಿಗಳ ಬಾಬ್ತು 59 ಲಕ್ಷ 39 ಸಾವಿರದ 549 ರೂ.ಗಳಿದೆ. ಐದು ಕೋಟಿ ಮೂರು ಲಕ್ಷದ 29 ಸಾವಿರದ 167 ರೂ.ಗಳ ಠೇವಣಿಯಿದೆ. ಪ್ರತಿಯೊಬ್ಬ ಜಾಮೀನುದಾರರು ಸಾಲಗಾರನಷ್ಟೆ ಸೊಸೈಟಿ ಹಣಕ್ಕೆ ಜವಾಬ್ದಾರನಾಗಿರುತ್ತಾನೆ. ಜಾಮೀನು ಆಗುವುದಕ್ಕೆ ಮುಂಚಿತವಾಗಿ ಸಾಲಗಾರನ ಆರ್ಥಿಕ ಸ್ಥಿತಿ, ವ್ಯವಹಾರ, ಸಾಲದ ಉದ್ದೇಶ, ಮತ್ತು ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಸಾಲದ ಕಂತುಗಳನ್ನು ಮರು ಪಾವತಿಸುವ ಸಾಮಥ್ರ್ಯವಿದೆಯೋ ಇಲ್ಲವೋ ಎನ್ನುವುದನ್ನು ಜಾಮೀನುದಾರರು ತಿಳಿದುಕೊಂಡಿರುಬೇಕೆಂದರು.
ದಿನಾಂಕ : 31-3-2023 ರ ಅಂತ್ಯಕ್ಕೆ ಒಂದು ಕೋಟಿ 86 ಲಕ್ಷ ಅರವತ್ತು ಸಾವಿರದ 373 ರೂ.ಗಳ ಸಾಲ ಬಾಕಿಯಿದ್ದು, 2024 ರ ಅಂತ್ಯಕ್ಕೆ 2 ಕೋಟಿ 59 ಲಕ್ಷದ 94 ಸಾವಿರದ 319 ರೂ.ಗಳ ಸಾಲ ಬರಬೇಕಿದೆ. ಸದರಿ ಸಾಲಿಗೆ 73 ಲಕ್ಷ 33 ಸಾವಿರದ 946 ರೂ.ಗಳ ಸಾಲ ವೃದ್ದಿಯಾಗಿದೆ. ಈ ಪೈಕಿ 26 ಲಕ್ಷದ 56 ಸಾವಿರದ 669 ರೂ.ಗಳ ಸಾಲ ಶೇ. 10.22 ರಷ್ಟು ಸುಸ್ತಿಯಲ್ಲಿರುತ್ತದೆ ಎಂದು ಸಭೆಯಲ್ಲಿ ಸದಸ್ಯರುಗಳ ಗಮನಕ್ಕೆ ತಂದರು.
ಚಿತ್ರದುರ್ಗ ಟೌನ್ ಕೋ–ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಿ.ಹೆಚ್.ಸೂರ್ಯಪ್ರಕಾಶ್, ನಿರ್ದೇಶಕರುಗಳಾದ ಡಾ.ರಹಮತ್ವುಲ್ಲಾ, ಬಿ.ವಿ.ಶ್ರೀನಿವಾಸ್ಮೂರ್ತಿ, ಬಿ.ಎಂ.ನಾಗರಾಜ ಬೇದ್ರೆ, ಕೆ.ಚಿಕ್ಕಣ್ಣ, ಸೈಯದ್ ಮುಜೀಬ್, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಶ್ರೀಮತಿ ಎ.ಚಂಪಕ, ಶ್ರೀಮತಿ ಎನ್.ಎಂ.ಪುಷ್ಪವಲ್ಲಿ ವೇದಿಕೆಯಲ್ಲಿದ್ದರು.
ಸೊಸೈಟಿಯ ಆರ್ಥಿಕ ಸಲಹೆಗಾರ ಮಹಮದ್ ನಯೀಮ್ ವರದಿ ಮಂಡಿಸಿದರು. ಪ್ರಭಾರ ವ್ಯವಸ್ಥಾಪಕ ಪಿ.ಮಂಜುನಾಥಗೌಡ ಹಾಗೂ ಸೊಸೈಟಿ ಸಿಬ್ಬಂದಿಗಳು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಸೊಸೈಟಿ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.