ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿಎಂ ಕುರ್ಚಿಗಾಗಿ ಗುಂಪುಗಳಾಗಿ ಬಡಿದಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ನಿಗಮಗಳಲ್ಲಿ ಹಣದ ಅವ್ಯವಹಾರ ಹೆಚ್ಚಾಗಿದೆ. ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಜಾತಿವಾರು ಅಭಿಪ್ರಾಯಗಳು ವ್ಯಕ್ತ ವಾಗುತ್ತಿವೆ. ನಮ್ಮ ಜಾತಿಯವರು ಸಿಎಂ ಆಗಬೇಕೆಂದು ಸ್ವಾಮೀಜಿಗಳೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅರ್ಹತೆ ಮತ್ತು ದಕ್ಷತೆ ಇದ್ದ ವ್ಯಕ್ತಿ ಸಿಎಂ ಆಗುವುದು ಅಗತ್ಯವಾಗಿದೆ. ಸಿಎಂ ಕುರ್ಚಿ ಮಾರಾಟದ ವಸ್ತುವಲ್ಲ, ಅದು ಶಾಸಕರಿಂದ ಆಯ್ಕೆಯಾಗುವ ಸ್ಥಾನ. ಇದರ ಬಗ್ಗೆ ಬಹಿರಂಗವಾಗಿ ಮಾತಾಡುವುದು ಸರಿಯಲ್ಲ. ಸಿಎಂ ಕುರ್ಚಿಗಾಗಿ ದಲಿತ ನಾಯಕರು, ಧ್ವನಿ ಎತ್ತಿದರೆ, ಮತ್ತೊಂದು ಕಡೆ ವೀರ ಶೈವ ಸಮಾಜ ಧ್ವನಿ ಎತ್ತಿದ್ದು, ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಸಿಎಂ ಕುರ್ಚಿ ಕಿತ್ತಾಟದಿಂದಾಗಿ ರಾಜ್ಯದಲ್ಲಿ ಆಡಳಿತ ಕುಸಿದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಸತ್ತ ಪ್ರಾಣಿಯಾಗಿದ್ದು, ಅದನ್ನು ಹರಿದು ತಿನ್ನುವ ರಣಹದ್ದುಗಳಾಗಿ ಶಾಸಕರು ಮಂತ್ರಿಗಳು ಕಚ್ಚಾಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಜನ ಪರ ಆಡಳಿತ ನೀಡಬೇಕಾಗಿದೆ. ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳಿಗೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಅವುಗಳು ಅರ್ಹರಿಗೆ ತಲುಪಬೇಕಿದೆ. ಬಡವರಿಗೆ ಶಿಕ್ಷಣ ಉದ್ಯೋಗ ಮತ್ತು ಆರೋಗ್ಯ ನೀಡುವುದು ಸರ್ಕಾರದ ಕೆಲಸ ಎಂದರು.ಈಸಮಯದಲ್ಲಿ ಜಿಲ್ಲಾಬಿಜೆಪಿ ಅಧ್ಯಕ್ಷ ಎ.ಮುರುಳಿ, ಮಾಜಿ ಶಾಸಕ ತಿಪ್ಪಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಧುರಿ ಗಿರೀಶ್,ಸಿದ್ದಾಪುರ ಸುರೇಶ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್, ಯಾದವ್, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ, ಸಂಚಾಲಕ ದಗ್ಗೆ ಶಿವಪ್ರಕಾಶ್ ,ಮಂಡಲಾಧ್ಯಕ್ಷ ನವೀನ್ ಚಾಲುಕ್ಯ ಇದ್ದರು.