ಪ್ರತಿ ತಾಲ್ಲೂಕಿನಲ್ಲಿ 10 ಸಾವಿರ ಗಿಡ ನೆಡಲು ಯೋಜನೆ ನ್ಯಾಯಾಧೀಶ ಎಂ.ವಿಜಯ್

ರಾಜ್ಯ

ಪ್ರತಿ ತಾಲ್ಲೂಕಿನಲ್ಲಿ 10 ಸಾವಿರ ಗಿಡ ನೆಡಲು ಯೋಜನೆ
ನ್ಯಾಯಾಧೀಶ ಎಂ.ವಿಜಯ್

ಚಿತ್ರದುರ್ಗ .05: ಅರಣ್ಯನಾಶದಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಕಾನೂನು ಸೇವಾ ಪ್ರಾಧಿಕಾರವು ಅರಣ್ಯ ಇಲಾಖೆ ಸಹಯೋಗದಲ್ಲಿ, ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ 10 ಸಾವಿರ ಗಿಡ ನಡೆಲು ಯೋಜನೆ ರೂಪಿಸಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಹೇಳಿದರು.

ನಗರದ ಓನಕೆ ಓಬವ್ವ ವೃತ್ತದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಪರಿಸರ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 

 

ಇತ್ತೀಚೆಗೆ ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದಕ್ಕೆ ಕಾರಣ ಪರಿಸರ ನಾಶ, ರೆಫ್ರಿಜಿರೇಟರ್ ಬಳಕೆಯಿಂದ ಹಾನಿಕಾರ ಸಿಎಫ್‌ಸಿ ಅನಿಲ ವಾತಾವರಣ ಸೇರುತ್ತಿದೆ. ಇದರಿಂದ ಮುಂದಿನ ಪೀಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪ್ರತಿ ಒಬ್ಬರಿಗೂ ಒಂದು ಗಿಡ ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಗಿಡ ನೆಟ್ಟು ಬೆಳಸಬೇಕು. ಮುಂದಿನ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲೂ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ನಿಂದ 35ಕ್ಕೆ ಇಳಿಯಲಿ. ಜಿಲ್ಲೆಯಾದ್ಯಂತ ಮುಂದಿನ ಎರೆಡು ತಿಂಗಳು ಕಾಲ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ಮಾಧ್ಯಮಗಳು ಕೂಡ ಸಾರ್ವಜನಿಕರಲ್ಲಿ ಪರಿಸರ ಹಾನಿಯ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಪರಿಸರ ರಕ್ಷಣೆ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ನ್ಯಾಯಾಧೀಶ ಎಂ.ವಿಜಯ್ ಕೋರಿದರು.

ಪರಿಸರ ಅಧಿಕಾರಿ ಈ. ಪ್ರಕಾಶ್ ಮಾತನಾಡಿ, ‘ಭೂ ಮರುಸ್ಥಾಪನೆ, ಮರುಭೂಮಿಕರಣ ಹಾಗೂ ಬರ ತಡೆಯುವಿಕೆ’ ಘೋಷವಾಕ್ಯದೊಂದಿಗೆ ಈ ಬಾರಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಾಗೂ ನಗರಸಭೆ ಆಯುಕ್ತೆ ಎಂ.ರೇಣುಕಾ ಜಾಥ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವುದರೊಂದಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ ನಾಯಕ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ನಾಶಿರುದ್ದೀನ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯುರು ಜಾಥದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರು ಪರಿಸರ ರಕ್ಷಣೆಯ ಘೋಷಣೆಗಳನ್ನು ಕೂಗುವುದರೊಂದಿಗೆ ನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

Leave a Reply

Your email address will not be published. Required fields are marked *