ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿರುದ್ದ ಕೋಟೆ ನಾಡು ಚಿತ್ರದುರ್ಗದಲ್ಲಿ ಮಾದಿಗ ಮಹಾ ಸಭಾದ ಮುಖಂಡರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಮಾಜಿ ಉಪಮುಖ್ಯ ಮಂತ್ರಿ ಪತ್ರಿಕಾ ಗೋಷ್ಠಿ ನೆಡೆಸುತ್ತಿದ್ದರು. ಇದೇ ವೇಳೆಯಲ್ಲಿ ಪತ್ರಿಕಾ ಗೋಷ್ಠಿ ನಡೆಯುವ ಸ್ಥಳಕ್ಕೆ ನುಗ್ಗಿದ ಮಾದಿಗ ಮಹಾಸಭಾದ ಮುಖಂಡರು ಮಾಜಿ ಡಿಸಿಎಂ ಅವರನ್ನು ನಿಮ್ಮ ಅವಧಿಯಲ್ಲಿ ದಲಿತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಇದರಿಂದ ಸಿಟ್ಟಿಗೆದ್ದ ಕಾರಜೋಳ ಮೊದಲು ಹೊರಗೆ ಹೋಗಿ ಇದೇನು ಗೂಂಡಾ ರಾಜ್ಯವಾ ? ನಿಮ್ಮದೇನಿದ್ದರೂ ಹೊರಗೆ ಬಂದ ಮೇಲೆ ಹೇಳಿ ಕೇಳುತ್ತೇನೆ ಎಂದರೂ ಬಿಡದೆ ವಾಗ್ವಾದಕ್ಕಿಳಿದರು. ನಂತರ ಕೆರಳಿದ ಕಾರಜೋಳ ಗನ್ ಮನ್ ಕರೆಯಿಸಿ ಅವರೆಲ್ಲರನ್ನೂ ಹೊರಗೆ ಹಾಕಿ ಎಂದು ಸೂಚಿಸಿದರು. ನಂತರ ಡಿಜಿಪಿ ಅಲೋಕ್ ಮೋಹನ್ ಗೆ ದೂರವಾಣಿ ಮೂಲಕ ಕರೆ ಮಾಡಿ ಗಲಾಟೆ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಸೂಚಿಸಿದರು. ಇತ್ತ ಆಕ್ರೋಶಗೊಂಡಿದ್ದ ಮಾದಿಗ ಮಹಾಸಭಾದ ಮುಖಂಡರು, ಹೊರಗೆ ಬಂದು ಪ್ರತಿಭಟನೆ ನಡೆಸಿ ಮಾಧ್ಯಮಗಳಿಗೆ ಮಾತಾಡಿದ ಹನುಮಂತಪ್ಪ ದುರ್ಗ, ದಲಿತರಿಗೆ ಬಿಜೆಪಿ ಸರ್ಕಾರವಿದ್ದಾಗ ಅನ್ಯಾಯವಾಗಿದೆ. ಇದನ್ನು ಕೇಳಲು ಹೋದರೆ ನಮ್ಮನ್ನು ಗೂಂಡಾಗಳೆಂದು ಕರೆಯುತ್ತಾರೆ. ಪೊಲೀಸ್ ರಿಗೆ ದೂರು ನೀಡುತ್ತಾರೆ. ಇದರ ವಿರುದ್ದ ನಾವು ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.