ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರ ತೊಡಗಿದೆ. ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೈ ಟಿಕೆಟ್ ಆಕಾಂಕ್ಷಿಗಳ ಕದನ ಮೊದಲುಗೊಂಡಿದೆ. ಇದಕ್ಕೆ ಸಾಕ್ಷಿಯಂತೆ ಇಂದು ಸಮಾಜ ಕಲ್ಯಾಣ ಸಚಿವ ಹಾಗೂ ಲೋಕಸಭಾ ಚುನಾವಣೆಯ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವೀಕ್ಷಕರಾಗಿರುವ ಹೆಚ್ ಸಿ ಮಹದೇವಪ್ಪ ಚಿತ್ರದುರ್ಗದ ಕಾಂಗ್ರೆಸ್ ಕಚೇರಿಗೆ ಆಗಮಿಸಲಿದ್ದಾರೆ. ಈ ವೇಳೆಯಲ್ಲಿ ಟಿಕೆಟ್ ಗಾಗಿ ಸುಮಾರು 10 ಜನ ಆಕಾಂಕ್ಷಿಗಳು ಅರ್ಜಿಯನ್ನು ಸಲ್ಲಿಸಲಿದ್ದಾರೆ. ಇದೇ ಸಮಯದಲ್ಲಿ ಆಯಾಯಾ ಆಕಾಂಕ್ಷಿಗಳು ತಮ್ಮ ಬೆಂಬಲಿಗರಿಂದ ಶಕ್ತಿ ಪ್ರದರ್ಶನವನ್ನು ಮಾಡಿಸಲಿದ್ದು, ತಮ್ಮ ನಾಯಕರಿಗೆ ಟಿಕೆಟ್ ಕೊಡಬೇಕೆಂದು ವೀಕ್ಷಕರ ಮುಂದೆ ಆಗ್ರಹಿಸಲಿದ್ದಾರೆ. ಈ ಬಾರಿ ಸದ್ದು ಮಾಡುತ್ತಿರುವುದು ಸ್ಥಳಿಯರು ಮತ್ತು ಹೊರಗಿನವರು ಎಂಬ ಚರ್ಚೆ, ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಎದ್ದಿದೆ. ಇಂತಹ ಕೂಗನ್ನಿಟ್ಟುಕೊಂಡು 2008 ರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದ ಡಾ. ಜೆಜೆ ಹಟ್ಟಿ ತಿಪ್ಪೇಸ್ವಾಮಿ ಟಿಕೆಟ್ ಫೈಟ್ ಗೆ ಹೊರಟಿದ್ದಾರೆ. ಇದರ ನಡುವೆ ಸ್ಥಳಿಯರೆಂದು ಹೇಳಿಕೊಂಡರೂ ಅಕ್ಕ ಪಕ್ಕದ ಜಿಲ್ಲೆಯವರು ಕೂಡ ಅರ್ಜಿಗಳನ್ನು ಹಾಕಿಕೊಳ್ಳುತ್ತಿದ್ದು, ಅರ್ಜಿಗಳನ್ನು ವೀಕ್ಷಕ ಹೆಚ್ ಸಿ ಮಹದೇವಪ್ಪ ಸ್ವೀಕರಿಸಿಲಿದ್ದಾರೆ. ಅವರಿಗೆ ಮಾಜಿ ಸಚಿವ ಹೆಚ್ ಆಂಜನೇಯ ಸಾತ್ ನೀಡಲಿದ್ದಾರೆ. ಅಕಾಂಕ್ಷಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ಮಹದೇವಪ್ಪ ಅವರು ಹೈ ಕಮಾಂಡ್ ಗೆ ತಲುಪಿಸಲಿದ್ದು, ಹೈಕಮಾಂಡ್ ಯಾರಿಗೆ ಬಾರಿ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.