ಕಳೆದ ಐದು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಮೊಳಕಾಲ್ಮೂರು ಕ್ಷೇತ್ರ ಇದೀಗ ಸ್ಪೋಟಗೊಂಡಿದೆ.ಅದು ಶ್ರೀರಾಮುಲು ವಿರುದ್ಧ ಇಷ್ಟು ದಿನ ಒಳಗೆ ಇಟ್ಟುಕೊಂಡಿದ್ದ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅದು ಹೇಗೆಂದರೆ ಸಾಕ್ಷಾತ್ ಶ್ರೀರಾಮುಲು ಈ ಬಾರಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದರೂ ನಾವು ಅವರನ್ನು ಸೋಲಿಸುತ್ತೇವೆ ಎಂದು ಹೇಳುವ ಮೂಲಕ ವೇದಿಕೆಯೊಂದನ್ನು ಕ್ಷೇತ್ರದ ಬಿಜೆಪಿ ಮುಖಂಡರು ಸಿದ್ದ ಮಾಡಿಕೊಂಡಿದ್ದಾರೆ. ಶ್ರೀರಾಮುಲು ಬೆಂಬಲಿತ ಅಭ್ಯರ್ಥಿ ಬಂದರೂ ಕೂಡ ಸೋಲಿಸುತ್ತೇವೆ ಎನ್ನುತ್ತಾರೆ ಮುಖಂಡರುಗಳು,ಇಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿತ ಅಭ್ಯರ್ಥಿಯಾದ ಜಯಪಾಲಯ್ಯ ಅವರು ತಮ್ಮ ಹುಟ್ಟು ಹಬ್ಬಕ್ಕಾಗಿ ಅವರ ಕಾರ್ಯಕರ್ತರ ಸಭೆಯನ್ನು ಚಳ್ಳಕೆರೆ ತಾಲೂಕಿನ ಕಾಲುವೆ ಹಳ್ಳಿಯಲ್ಲಿ ಆಯೋಜಿಸಿದ್ದರು. ಈ ಸಭೆಯಲ್ಲಿ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರದ ಮುಖಂಡರು ಕಾರ್ಯಕರ್ತರು ಜಮಾಯಿಸಿದ್ದು, ಸಭೆಯಲ್ಲಿ ಶ್ರೀರಾಮು ಮತ್ತು ಅವರು ಕರೆ ತಂದಿರುವ ನೇರ್ಲಗುಂಟೆ ತಿಪ್ಪೇಸ್ವಾಮಿ ವಿರುದ್ಧವೆ ಆಕ್ರೋಶ ವ್ಯಕ್ತವಾಯಿತು. ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಮೊಳಕಾಲ್ಮೂರು ಕ್ಷೇತ್ರಕ್ಕೆ ಕರೆ ತಂದು ಅವರಿಂದ ಕ್ಷೇತ್ರದ ಅಭಿವೃದ್ದಿ ಕಾಣಬೇಕು ಎಂದು ಬಯಸಿ ಇಲ್ಲಿನ ಮುಖಂಡರು ಶ್ರೀರಾಮುಲು ಅವರನ್ನು ಗೆಲ್ಲಿಸಿ ಕಳುಹಿಸಿದ್ದರು. ಆದರೆ ಅವರು ಕ್ಷೇತ್ರದ ಅಭಿವೃದ್ದಿಗೆ ಬದಲಿಗೆ ಸ್ವಜನ ಪಕ್ಷಪಾತವನ್ನು ಮಾಡಿದ್ದಾರೆ. ಮೊಳಕಾಲ್ಮೂರನ್ನು ಬಳ್ಳಾರಿಗೆ ಜೀತದಾಳಾಗಿಸಿಕೊಳ್ಳಲು ಹೊರಟಿದ್ದಾರೆ. ಯಾರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್ ನಲ್ಲಿದ್ದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಅವರಿಗೆ ಎರಡು ಕೋಟಿ ಕೊಟ್ಟು ಚುನಾವಣೆಗೆ ನಿಲ್ಲಿಸಲು ಹೊರಟಿದ್ದಾರೆ. ಆದ್ದರಿಂದ ಮೊಳಕಾಲ್ಮೂರಿನ ಕ್ಷೇತ್ರದ ಜನತೆಗೆ ಸ್ವಾಭಿಮಾನ ಹೆಚ್ಚಿದೆ. ಈ ಬಾರಿ ಶ್ರೀರಾಮುಲು ಬೆಂಬಲಿತ ತಿಪ್ಪೇಸ್ವಾಮಿ ಬಿಟ್ಟು, ಜಯಪಾಲಯ್ಯ, ಪ್ರಭಾಕರ ಮ್ಯಾಸನಾಯಕ ಹಾಗೂ ಯತ್ನಹಟ್ಟಿ ಗೌಡ ಇವರಲ್ಲಿ ಯಾರಿಗಾದರೂ ಟಿಕೆಟ್ ಕೊಟ್ಟರೂ ನಾವು ಟೊಂಕಕಟ್ಟಿ ನಿಂತು ಬಿಜೆಪಿಯನ್ನು ಮತ್ತು ಅಭ್ಯರ್ಥಿಯನ್ನು ಗೆಲ್ಲಿಸಿ ತರುತ್ತೇವೆ, ಇಲ್ಲದೇ ಹೋದರೆ ನಾವು ಶ್ರೀರಾಮುಲು ಅಲ್ಲ ಅವರು ಬೆಂಬಲಿತ ಅಭ್ಯರ್ಥಿ ಯಾರೇ ಬಂದರೂ ಕೂಡ ಅವರನ್ನು ಸೋಲಿಸುವುದು ಖಂಡಿತ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಜಯಪಾಲಯ್ಯ ಅವರು, ನಾನೂ ಕೂಡ ಉತ್ತಮ ಸೇವೆಯನ್ನು ಮಾಡಿ ಕೊಂಡು ಬಂದಿದ್ದೇನೆ, ನಾನು ಕ್ಷೇತ್ರ ಬಿಟ್ಟ ಮೇಲೆ ನೀವೆ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿ ಶ್ರೀರಾಮುಲು ಮಾತು ಕೊಟ್ಟಿದ್ದರು. ಆದರೆ ಇಂದು ಅವರು ಬೇರೆಯವರಿಗೆ ಬೆಂಬಲಿಸುತ್ತಿದ್ದಾರೆ ಆದರೆ ಪಕ್ಷ ನನಗೆ ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಚಳ್ಳಕೆರೆ ಕ್ಷೇತ್ರದಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದೇನೆ, ಕ್ಷೇತ್ರದ ನಾಡಿಮಿಡಿತ ನನಗೆ ತಿಳಿದಿದೆ.ಆದ್ದರಿಂದ ಬಿಜೆಪಿ ಪಕ್ಷ ಹಾಗೂ ಮುಖಂಡರು ನನಗೆ ಟಿಕೇಟ್ ನೀಡಬೇಕು ಎಂದು ಮನವಿ ಮಾಡಿದರು. ಇನ್ನು ಬಿಜೆಪಿ ಮುಖಂಡ ನಾಗಿರೆಡ್ಡಿ ಮಾತನಾಡಿ,ಶ್ರೀರಾಮುಲು ಮೊಳಕಾಲ್ಮೂರುಕ್ಷೇತ್ರವು ಯಾವುದೇ ಅಭಿವೃದ್ದಿಯಾಗಿಲ್ಲ, ಶ್ರೀರಾಮುಲು ಅವರು ಕೇವಲ ತಮ್ಮ ಸಂಬಂಧಿಕರನ್ನು ಬೆಳೆಸಿದ್ದಾರೆ.ಬರಪೀಡಿತ ಪ್ರದೇಶವಾದ ಮೊಳಕಾಲ್ಮೂರಿಗೆ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ, ಇದರಿಂದ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ. ಈ ಬಾರಿ ಮೂವರು ಆಕಾಂಕ್ಷಿಗಳಿದ್ದಾರೆ, ಅವರಲ್ಲಿ ಯಾರಿಗೆ ಕೊಟ್ಟರೂ ಕೂಡ ನಾವು ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷವನ್ನು ಗೆಲ್ಲಿಸುತ್ತೇವೆ, ಇಲ್ಲವೇ ನಾವು ಮುಂದಿನ ದಿನಗಳಲ್ಲಿ ನಮ್ಮ ತೀರ್ಮಾನವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು. ಸಾವಿರಾರು ಕಾರ್ಯಕರ್ತರು ಹಾಗು ಜಯಪಾಲಯ್ಯ ಅವರ ಬೆಂಬಲಿಗರ ಸಭೆಯನ್ನು ಇಂದುಕಾಲುವೆ ಹಳ್ಳಿಯಲ್ಲಿ ನಡೆಸಿದ್ದು, ಸಭೆಯಲ್ಲೂ ಕೂಡ ಮೊಳಕಾಲ್ಮೂ ರು ಕ್ಷೇತ್ರಕ್ಕೆ ಅನ್ಯಾಯ ವಾಗಿದ್ದು, ಈ ಬಾರಿ ಸರಿಪಡಿಸಬೇಕು ಎಂದು ಜಯಪಾಲಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಕೇಳಿಬಂತು